ನಾಯಿ ಬೊಗಳಿದ್ದರಿಂದ ಸಿಟ್ಟುಗೊಂಡು ಮಾಲೀಕನಿಗೇ ಚಾಕು ಇರಿದು ಕೊಂದ್ರು!

– ಮೂವರು ಆರೋಪಿಗಳಲ್ಲಿ ಇಬ್ಬರು ಅರೆಸ್ಟ್

ಲಕ್ನೋ: ಮೂವರು ಯುವಕರು ಶ್ವಾನದ ಮಾಲೀಕನಿಗೆ ಚಾಕು ಇರಿದು ಕೊಲೆಗೈದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಸಿತಾಪುರ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸಚಿನ್ ಕುಮಾರ್(25) ಎಂದು ಗುರುತಿಸಲಾಗಿದೆ. ಈತ ಸಿಧೌಲಿಯ ಕಾಸ್ಬಾ ಬಜಾರ್ ಪ್ರದೇಶದ ನಿವಾಸಿ. ಆರೋಪಿಗಳನ್ನು ಉಮಾ, ರೋಹಿತ್ ಮತ್ತು ಗೋವಿಂದ್ ಎಂದು ಗುರುತಿಸಲಾಗಿದೆ. ಮೂವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.

ಭಾನುವಾರ ರಾತ್ರಿ ಸಚಿನ್ ತನ್ನ ಸಾಕು ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ತಡೆದಿದ್ದಾರೆ. ಈ ವೇಳೆ ಮೂವರಿಗೆ ಶ್ವಾನ ಗದರಿಸಿದೆ. ಇದು ಅವರನ್ನು ಸಿಟ್ಟಿಗೇಳುವಂತೆ ಮಾಡಿದೆ. ಅಲ್ಲದೆ ಮೂವರು ಕೋಪದಿಂದ ಸಚಿನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಸಚಿನ್ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಸಚಿನ್ ಸಹೋದರರಾದ ಸೋನು ಹಾಗೂ ಸುನಿಲ್ ಸಹಾಯಕ್ಕಾಗಿ ಧಾವಿಸಿದ್ದಾರೆ. ಈ ವೇಳೆ ಅವರು ಕೂಡ ಆರೋಪಿಗಳಿಂದ ಥಳಿಸಲ್ಪಟ್ಟರು. ಅದಾಗಲೇ ಸ್ಥಳೀಯರು ಜಮಾಯಿಸಿದ್ದು, ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸಚಿನ್ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

Comments

Leave a Reply

Your email address will not be published. Required fields are marked *