ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಎಂಟ್ರಿ..!

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದ್ದ ನಾಯಕತ್ವ ಫೈಟ್‍ಗೆ ಕಡೆಗೂ ಹೈಕಮಾಂಡ್ ಎಂಟ್ರಿ ಕೊಟ್ಟಂತೆ ಕಾಣುತ್ತಿದೆ. ಮೊದಲ ಬಾರಿಗೆ ರಾಜ್ಯದ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಸದ್ದು ಮಾಡಿದೆ. ಬುಧವಾರ ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ನಡೆದಿದೆ. ಸಿಎಂ, ರಾಜ್ಯಾಧ್ಯಕ್ಷ ಸೇರಿ ರಾಜ್ಯದ ಆರು ಪ್ರಮುಖರಿಗೆ ಕರೆ ಮಾಡಿ ಅರುಣ್ ಸಿಂಗ್ ರಿಪೋರ್ಟ್ ಪಡೆದಿದ್ದಾರೆ.

ರಾಜ್ಯದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಆರ್‍ಎಸ್‍ಎಸ್ ಮತ್ತು ಅರುಣ್ ಸಿಂಗ್ ಮೂಲಕ ವರದಿ ಪಡೆದಿರುವ ಹೈಕಮಾಂಡ್, ಎಲ್ಲವನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸ್ತಿದೆ. ಮುಂದೇನು ಮಾಡಿದ್ರೆ ಏನಾಗಬಹುದು ಎಂಬ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. ಮುಂದಿನ ವಾರ ಉಸ್ತುವಾರಿ ಅರುಣ್ ಸಿಂಗ್‍ರನ್ನು ರಾಜ್ಯಕ್ಕೆ ಕಳಿಸಿಕೊಡಲಿರುವ ಬಿಜೆಪಿ ಹೈಕಮಾಂಡ್, ಶಾಸಕರ ಜೊತೆ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಿದೆ. ಇದರ ಆಧಾರದ ಮೇಲೆ ಹೈಕಮಾಂಡ್, ನಾಯಕತ್ವ ಬದಲಾವಣೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ.

ಬಿಜೆಪಿ ಶಾಸಕರು ಜೂನ್ 15 ಬಳಿಕ ಬೆಂಗಳೂರಿನತ್ತ ಮುಖ ಮಾಡಲಿದ್ದು, ಗುಂಪು ಸಭೆಗಳು, ರಹಸ್ಯ ಸಭೆಗಳು ಹೆಚ್ಚಬಹುದು ಎನ್ನಲಾಗುತ್ತಿದೆ. ಆದರೆ ಇವನ್ನು ತಡೆಯಬಾರದು ಅಂತ ಈಗಾಗಲೇ ಸಂದೇಶ ಕೊಟ್ಟಾಗಿದೆ. ಏನಾಗುತ್ತೋ ನೋಡೋಣ ಎಂಬ ತೀರ್ಮಾನಕ್ಕೆ ಸಿಎಂ ಯಡಿಯೂರಪ್ಪ ಬಂದಿದ್ದಾರೆ ಅಂತಾ ಹೇಳಲಾಗ್ತಿದೆ. ಆದರೆ ಸಚಿವ ಅಶೋಕ್ ಮಾತ್ರ ಅಂಥಾದ್ದೇನು ಇಲ್ಲ ಅಂತಿದ್ದಾರೆ. ಮುಂದಿನ ಎರಡು ವರ್ಷ ಯಡಿಯೂರಪ್ಪನವ್ರೇ ಸಿಎಂ ಎಂದು ಕೇಂದ್ರವೇ ಹೇಳಿದೆ.. ನಾನಂತೂ ಸಿಎಂ ರೇಸ್‍ನಲ್ಲಿ ಇಲ್ಲ.. ಮುಂದೆ ಭವಿಷ್ಯ ಗೊತ್ತಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಒಳ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತೆ, ಆರು ತಿಂಗಳಲ್ಲಿ ಚುನಾವಣೆ ನಡೆಯುತ್ತೆ: ಶಾಸಕ ಸಂಗಮೇಶ್

ಈ ಮಧ್ಯೆ ಹಲವು ಶಾಸಕರು ಬಿಎಸ್‍ವೈ ಪರ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಯಡಿಯೂರಪ್ಪಗೆ ವಯಸ್ಸಾದ್ರೂ ಜವಾಬ್ದಾರಿ ನಿಭಾಯಿಸುವಲ್ಲಿ ಸಮರ್ಥರಿದ್ದಾರೆ. ಯಡಿಯೂರಪ್ಪ ವಿಚಾರದಲ್ಲಿ ಹೈಕಮಾಂಡ್ ಇಕ್ಕಟ್ಟಿನಲ್ಲಿ ಸಿಲುಕಿದಂತಿದೆ. ದಕ್ಷಿಣ ಭಾರತದ ಏಕೈಕ ಬಿಜೆಪಿ ಆಡಳಿತ ಇರೋ ರಾಜ್ಯ ಅಂದ್ರೆ ಕರ್ನಾಟಕ. ಬಿಜೆಪಿಗೆ ಕರ್ನಾಟಕ ಮಾತ್ರ ದೊಡ್ಡ ಹೋಪ್ ಕೊಡೋ ರಾಜ್ಯ. ರಾಜ್ಯದಲ್ಲಿ ಬಿಎಸ್‍ವೈ ಮಾತ್ರ ಮುಂಚೂಣಿ ಮತ್ತು ಬಲಿಷ್ಠ ನಾಯಕ. ಅಷ್ಟು ಸುಲಭಕ್ಕೆ ಅವರನ್ನು ಪಕ್ಕಕ್ಕೆ ಸರಿಸುವುದು ಕಷ್ಟ. ಹೀಗಾಗಿ ಹೈಕಮಾಂಡ್ ಅಲೆದು ತೂಗಿ ಮಹತ್ವದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *