ನಾನು ಸತ್ರೆ ಸಾಯ್ತೀನಿ ಬಿಡಿ ನಿಮಗೇನು? – ಅಧಿಕಾರಿಗಳ ಮೇಲೆ ಸೋಂಕಿತನ ದರ್ಪ

ಚಿಕ್ಕಮಗಳೂರು: ನಾನು ಸತ್ತರೆ ಸಾಯುತ್ತೇನೆ ಬಿಡಿ. ನಿಮಗೇನು? ನಾನು ಮನೆಯಲ್ಲಿದ್ದರೆ ನಮ್ಮ ತೋಟಕ್ಕೆ ಗೊಬ್ಬರ ನೀವು ಹಾಕುತ್ತೀರಾ ಎಂದು ಕೊರೊನಾ ಸೋಂಕಿತ ವ್ಯಕ್ತಿ ಅಧಿಕಾರಿಗಳ ಮೇಲೆ ಪ್ರಶ್ನಿಸಿ ದರ್ಪ ತೋರಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ನೇರಡಿ ಗ್ರಾಮದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರಿಂದ ಅಧಿಕಾರಿಗಳು ವರದಿ ಬರುವ ತನಕ ಆತನಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಅಲ್ಲದೆ ಆ ವ್ಯಕ್ತಿಗೆ ಪಾಸಿಟಿವ್ ಬಂದಿರುವ ಬಗ್ಗೆ ಮೊಬೈಲ್‍ಗೆ ಮೆಸೇಜ್ ಕೂಡ ಕಳುಹಿಸಲಾಗಿತ್ತು. ಹೀಗಿದ್ದರೂ ಆತನಿಗೆ ಪಾಸಿಟಿವ್ ಬಂದಿದ್ದರೂ ಗ್ರಾಮದಲ್ಲಿ ಓಡಾಡಿಕೊಂಡು ಹೊಲಗದ್ದೆ ತೋಟಗಳಿಗೆ ಹೋಗಿ ಬರುತ್ತಿದ್ದನು.

ಮರುದಿನ ಅಧಿಕಾರಿಗಳು ಆತನ ಯೋಗ-ಕ್ಷೇಮ ವಿಚಾರಿಸಲು ಮನೆಗೆ ಹೋದಾಗ ಆತ ಇರಲಿಲ್ಲ. ಅದೇ ವೇಳೆಗೆ ತೋಟದಿಂದ ಬಂದ ಆ ವ್ಯಕ್ತಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆ ವ್ಯಕ್ತಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿದ್ದಾನೆ. ನಮ್ಮ ತೋಟಕ್ಕೆ ಗೊಬ್ಬರ ಹಾಕಲು ನೀವು ಬರ್ತೀರಾ. ನಾನು ಸತ್ತರೆ ಸಾಯುತ್ತೇನೆ ಬಿಡಿ. ನಾನು ಹೊರಗಡೆ ಓಡಾಡ್ತೀನಿ ನೀವ್ಯಾರು ಕೇಳಬೇಡಿ ಎಂದು ಅಧಿಕಾರಿಗಳ ಮೇಲೆ ದರ್ಪ ಮೆರೆದಿದ್ದಾನೆ. ಇದನ್ನು ಓದಿ: ಲಾಕ್‍ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಮಾರಿ ಹಬ್ಬ

ವ್ಯಕ್ತಿಯ ಮನೆಯಲ್ಲಿ ಆತ ಸೇರಿದಂತೆ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ವ್ಯಕ್ತಿಯ ದಬ್ಬಾಳಿಕೆ ಕಂಡ ಅಧಿಕಾರಿಗಳು ಆತನ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದರಿಂದ 14 ದಿನಗಳ ಬಳಿಕ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *