ನಾನು ಲೇ ಸಿದ್ದರಾಮಯ್ಯ ಎಂದು ಕರೆದರೆ ಹೇಗಿರುತ್ತೆ : ಸಚಿವ ಈಶ್ವರಪ್ಪ

ಶಿವಮೊಗ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು. ಆದರೂ ಅವರಿಗೆ ಯಾರನ್ನು ಹೇಗೆ ಮಾತನಾಡಿಸಬೇಕು, ಯಾವ ಪದ ಬಳಕೆ ಮಾಡಬೇಕು ಎಂಬುದೇ ಗೊತ್ತಿಲ್ಲ. ಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಏಕವಚನ ಪದ ಬಳಸುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ನಾನು ಲೇ ಸಿದ್ದರಾಮಯ್ಯ ಎಂದು ಕರೆದರೆ ಹೇಗಿರುತ್ತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನೆಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ವಿದೂಷಕ ಎಂದಿದ್ದಾರೆ. ನೀವೊಬ್ಬರು ಮುಖ್ಯಮಂತ್ರಿ ಆಗಿದ್ದವರು ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಿರಿ. ನನಗೂ ಲೇ ಸಿದ್ದರಾಮಯ್ಯ ಎಂದು ಕರೆಯಲು ಬರೋದಿಲ್ವಾ. ಆದರೆ ನಾನು ಅಂತಹ ಪದ ಬಳಸುವುದಿಲ್ಲ ಎಂದರು.

ಮಸ್ಕಿ ಹಾಗೂ ಬಸವಕಲ್ಯಾಣದ ಉಪ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಪಕ್ಷಾಂತರಿಗಳಿಗೆ ಬುದ್ಧಿ ಕಲಿಸಿ, ಕಾಂಗ್ರೆಸ್ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ಅಭ್ಯರ್ಥಿಗಳು 30 ಕೋಟಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಎಷ್ಟು ಕೋಟಿ ಹಣ ಪಡೆದಿದ್ದರು? ಹಾಗಾದರೆ ಅವರು ಪಕ್ಷಾಂತರ ಮಾಡಿಕೊಂಡಿಲ್ವ? ರಾಜಕಾರಣದಲ್ಲಿ ರಾಜಕೀಯ ಪಕ್ಷ ಇರುವವರೆಗೆ ಪಕ್ಷಾಂತರ ಇದ್ದೇ ಇರುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *