ನಾನು ಮೊನ್ನೆ ಟೈಲರ್ ಬಳಿ ಚೆಕ್ ಮಾಡಿಸಿದೆ, ನಂದು 46 ಇಂಚಿನ ಎದೆ: ಸಿದ್ದರಾಮಯ್ಯ

– ಮೋದಿ ಸ್ವಾತಂತ್ರ್ಯ ಬಂದಮೇಲೆ ಹುಟ್ಟಿದ ಗಿರಾಕಿ

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರು 56 ಇಂಚಿನ ಎದೆ ಅಂತಾರೆ. ನಾನು ಮೊನ್ನೆ ಟೈಲರ್ ಬಳಿ ಚೆಕ್ ಮಾಡಿಸಿದೆ. ನಂದು 46 ಇಂಚಿನ ಎದೆ. ಎಷ್ಟು ಇಂಚಿನ ಎದೆ ಅನ್ನೋದು ಮುಖ್ಯ. ಎದೆಯಲ್ಲಿ ಮಾನವೀಯತೆ ಮನುಷ್ಯತ್ವ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿ ಸ್ವಾತಂತ್ರ್ಯ ಬಂದಮೇಲೆ ಹುಟ್ಟಿದ ಗಿರಾಕಿ. ನಾನು ಸ್ವಾತಂತ್ರ್ಯ ಬರುವ ಸ್ವಲ್ಪ ದಿನ ಮುಂಚೆ ಹುಟ್ಟಿದವನು. ಯಾರಾದರೂ ಬಿಜೆಪಿ ಅವರು ದೇಶಕ್ಕೋಸ್ಕರ ಪ್ರಾಣಕೊಟ್ಟಿದ್ದಾರಾ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ. ಜೆಡಿಎಸ್ ಅಧಿಕಾರಕ್ಕೆ ಬರ್ತೀವಿ ಅಂತಾರೆ, ಹೇಗೆ ಬರ್ತಾರೆ..? ನಾನು ಚಲುವರಾಯಸ್ವಾಮಿ ಜೆಡಿಎಸ್‍ನಲ್ಲಿದ್ದಾಗ ಹೆಚ್ಚು ಸೀಟ್ ಗೆದ್ದಿದ್ವಿ. ಆಮೇಲೆ 28, ಕಳೆದ 37 ಮುಂದೆ 15 ಬರಬಹುದು. ಜೆಡಿಎಸ್ ಜೊತೆಗಿನ ಮೈತ್ರಿಗೆ ನಾನು ಒಪ್ಪಿರಲಿಲ್ಲ. ಹೈಕಮಾಂಡ್ ತೀರ್ಮಾನವಾಗಿತ್ತು ಎಂದರು.

ಇದೇ ವೇಳೆ ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಸ್ವಾಮಿ ಸೋಲಬೇಕಾ ಎನ್ನುವ ಬದಲು ನರೇಂದ್ರ ಮೋದಿ ಎಂದು ಹೇಳಿದ ಸಿದ್ದರಾಮಯ್ಯ, ಕಳೆದ ಎಂಎಲ್‍ಎ ಚುನಾವಣಾ ಪ್ರಚಾರದ ವೇಳೆಯೂ ನರೇಂದ್ರ ಸ್ವಾಮಿ ಬದಲು ನರೇಂದ್ರ ಮೋದಿ ಅಂತ ಸಿದ್ದರಾಮಯ್ಯ ಹೇಳಿದ್ದು, ಇದೀಗ ಮತ್ತೆ ಅದೇ ಎಡವಟ್ಟು ಮಾಡಿ ಪೇಚಿಗೆ ಸಿಲುಕಿದ್ರು.

ಬಿಜೆಪಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಅವಧಿ ಎರಡೂವರೆ ವರ್ಷಕ್ಕೆ ಇಳಿಸಿದ್ದಕ್ಕೆ ನಮ್ಮ ವಿರೋಧವಿದೆ. 5 ವರ್ಷ ಪೂರ್ಣ ಅವಧಿ ಇದ್ರೆ ಮಾತ್ರ ಅವರು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಪಂಚಾಯತ್ ವ್ಯವಸ್ಥೆ ಬಿಜೆಪಿ ಕೊಡುಗೆ ಏನು..? ಅಧಿಕಾರ ವಿಕೇಂದ್ರೀಕರಣ, ಮಹಿಳೆಯರು, ಹಿಂದುಳಿದವರಿಗೆ ಮಿಸಲಾತಿ ಸಿಗಬೇಕು ಎಂದು ಬಿಜೆಪಿ ಯಾವತ್ತೂ ಹೋರಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರು ಹೇಳುತ್ತಾರೆ ನಾನು ಹಿಂದುಳಿದವರಿಗೆ ಮೀಸಲಾತಿ ಕೊಟ್ಟೆ ಅಂತ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. 73,74ನೇ ತಿದ್ದುಪಡಿ ಮೂಲಕ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಪಂಚಾಯತ್ ವ್ಯವಸ್ಥೆಯಲ್ಲಿ ಬಿಜೆಪಿ ಜೆಡಿಎಸ್‍ನವರ ಯಾವ ಕೊಡುಗೆಯೂ ಇಲ್ಲ. ಬಿಜೆಪಿ ಜೆಡಿಎಸ್ ಸುಳ್ಳು ಹೇಳುತ್ತಾರೆ. ಸತ್ಯ ತಿಳಿಸಬೇಕಾದವರು ಕಾಂಗ್ರೆಸ್. ಆದ್ರೆ ಕಾಂಗ್ರೆಸ್ ಸತ್ಯ ತಿಳಿಸದೆ ಅಧಿಕಾರ ಕಳೆದುಕೊಂಡಿದೆ. ಸತ್ಯ ಹೇಳದೆ ಇರುವುದೇ ನಮ್ಮ ಕಾರ್ಯಕರ್ತರ ಕೊರತೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *