ನಾದಿನಿ ಮನೆಗೆ ಹೋಗಿದ್ದಕ್ಕೆ ಗರ್ಭಿಣಿ ಪತ್ನಿಯನ್ನೇ ಕೊಂದ

– ಪತಿ ಬರೋ ಮುನ್ನ ಮನೆಗೆ ಬರದಿದ್ದೇ ತಪ್ಪಾಯ್ತು
– ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋದ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗಿದ್ದ ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಹೇಮಲತಾ (30) ಮೃತ ಮಹಿಳೆ. ಆರೋಪಿ ವಿಜಯ್ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಘಟನೆ ದಕ್ಷಿಣಪುರಿಯಲ್ಲಿರುವ ಅಂಬೇಡ್ಕರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಮಧ್ಯರಾತ್ರಿ ಸುಮಾರು 12.30ಕ್ಕೆ ಆರೋಪಿ ವಿಜಯ್ ಪೊಲೀಸ್ ಠಾಣೆಗೆ ಹೋಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ತಕ್ಷಣ ಪೊಲೀಸ್ ಅಧಿಕಾರಿಗಳ ತಂಡ ಆರೋಪಿ ಮನೆಗೆ ಹೋಗಿ ನೋಡಿದ್ದಾರೆ. ಅಲ್ಲಿ ಬೆಡ್‍ರೂಮಿನಲ್ಲಿ ಹೇಮಲತಾಳ ಮೃತದೇಹ ಪತ್ತೆಯಾಗಿದೆ. ಅಲ್ಲದೇ ಹೇಮಲತಾ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಪತ್ತೆಯಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಆರೋಪಿ ವಿಜಯ್‍ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ನನ್ನ ಜೊತೆ ವಾದ ಮಾಡುತ್ತಿದ್ದಳು. ಹೀಗಾಗಿ ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಹೇಮಲತಾ ಐದು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಪತಿ ವಿಜಯ್ ಸಹೋದರಿ ಪಕ್ಕದಲ್ಲಿಯೇ ವಾಸಿಸುತ್ತಿದ್ದರು. ಶನಿವಾರ ಸಂಜೆ ಕೆಲ ಮನೆಯ ವಸ್ತುಗಳನ್ನು ಖರೀದಿಸಲು ವಿಜಯ್ ಹೊರಗೆ ಹೋಗಿದ್ದಾನೆ. ಈ ವೇಳೆ ಹೇಮಲತಾ ನಾದಿನಿಯನ್ನು ಭೇಟಿಯಾಗಲು ಹೋಗಿದ್ದರು. ಆದರೆ ಹೇಮಲತಾ ಮನೆಗೆ ಹಿಂತಿರುಗುವ ಮೊದಲು ವಿಜಯ್ ಮನೆಗೆ ಬಂದಿದ್ದಾನೆ. ನಂತರ ಮನೆಯಲ್ಲಿ ಪತ್ನಿಯನ್ನು ಹುಡುಕಾಡಿದ್ದಾನೆ. ಆದರೆ ಹೇಮಲತಾ ಎಲ್ಲೂ ಕಾಣಿಸಿಲಿಲ್ಲ. ಇದರಿಂದ ಆರೋಪಿ ವಿಜಯ್ ಕೋಪ ಮಾಡಿಕೊಂಡಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾತ್ರಿ ಹೇಮಲತಾ ಮನೆಗೆ ವಾಪಸ್ ಬಂದಿದ್ದಾಳೆ. ಆಗ ದಂಪತಿಯ ಮಧ್ಯೆ ಜಗಳ ಉಂಟಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ಕೋಪದಿಂದ ವಿಜಯ್, ಹೇಮಲತಾಳ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ.

ವಿಜಯ್ ನನ್ನ ಸಹೋದರಿಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದನು. ಆತ ಯಾರನ್ನೂ ಭೇಟಿಯಾಗಲು ಬಿಡುತ್ತಿರಲಿಲ್ಲ ಎಂದು ಹೇಮಲತಾ ಸೋದರಿ ಆಶಾ ಆರೋಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *