ನಮ್ಮದು ಅರ್ಜುನನ ರೀತಿ ಗುರಿ: ಆರ್.ಅಶೋಕ್

ಬೆಂಗಳೂರು: ನಮ್ಮದು ಅರ್ಜುನನ ರೀತಿಯ ಗುರಿ. ಆರ್.ಆರ್.ನಗರದಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಆರ್.ಆರ್.ನಗರ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಪರವಾಗಿ ಕ್ಷೇತ್ರದಲ್ಲಿ ಚುನಾವಣೆ ಕೆಲಸ ನಾವು ಮಾಡುತ್ತೇವೆ. ಚುನಾವಣೆ ಮುಗಿಯುವರೆಗೂ ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವುದು ನಮ್ಮ ಧ್ಯೇಯ, ಕರ್ತವ್ಯ ಮತ್ತು ಗುರಿ ಎಂದು ತಿಳಿಸಿದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು, 2017-18ರಲ್ಲಿ ಡಿಕೆ ಶಿವಕುಮಾರ್ ವಿರುದ್ಧ ದಾಖಲಾದ ಪ್ರಕರಣಗಳು ತನಿಖೆ ಮುಂದುವರಿದಿದೆ. ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಬಳಸಿಕೊಂಡು ಗೆಲ್ಲುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ ಸಿಬಿಐ ದಾಳಿಯಲ್ಲಿ ಯಾವುದೇ ರಾಜಕೀಯವಿಲ್ಲ. ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಮನೆ ಮೇಲೆ ದಾಳಿ ನಡೆದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆ ದಾಳಿ ಕಾಂಗ್ರೆಸ್ ಮಾಡಿಸಿತ್ತು ಎಂದು ಅವರು ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.

ಆರ್‍ಎಸ್‍ಎಸ್ ಐವತ್ತು ಕೋಟಿ ಚುನಾವಣೆಗೆ ಖರ್ಚು ಮಾಡುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮಾಜಿ ಮುಖ್ಯಮಂತ್ರಿಗಳಾಗಿ ಈ ರೀತಿ ಹೇಳಿಕೆ ನೀಡೋದು ಅವರಿಗೆ ಶೋಭೆ ತರಲ್ಲ. ಆರ್‍ಎಸ್‍ಎಸ್ ಒಂದು ರಾಷ್ಟ್ರೀಯ ಸೇವಾ ಸಂಸ್ಥೆ. ರಾಜಕಾರಣಕ್ಕೂ ಮತ್ತು ಆರ್‍ಎಸ್‍ಎಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *