ನನ್ನ, ದರ್ಶನ್ ಹೆಸರು ಬಳಸಿ ಲೋನ್ ವಿಚಾರವಾಗಿ ವಂಚನೆ: ಉಮಾಪತಿ

ಮೈಸೂರು: ನನ್ನ ಮತ್ತು ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಲೋನ್ ಕೊಡುವುದಾಗಿ ಒರ್ವ ಮಹಿಳೆ ವಂಚನೆ ಮಾಡುತ್ತಿರುವ ಬಗ್ಗೆ ದೂರು ನೀಡಲು ಎಸಿಪಿ ಕಚೇರಿಗೆ ಬಂದಿದ್ದೇವೆ ಎಂದು ನಿರ್ಮಾಪಕರಾದ ಉಮಾಪತಿ ಅವರು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾಪತಿ ಅವರು, ಲೋನ್ ವಿಚಾರದಲ್ಲಿ ನಟ ದರ್ಶನ್ ಹಾಗೂ ನೀವು ಶ್ಯೂರಿಟಿ ಹಾಕುತ್ತಿದ್ದೀರಂತೆ ಎಂದು ಒಂದು ಕರೆ ಬರುತ್ತದೆ. ಆಗ ನಾನು ದರ್ಶನ್ ಅವರನ್ನು ಕೇಳಿದೆ ನೀವು ಯಾರಿಗಾದರು ಶ್ಯೂರಿಟಿ ಹಾಕಿದ್ದೀರ ಎಂದು ಅವರು ಇಲ್ಲ ಎನ್ನುತ್ತಾರೆ. ಆ ಬಳಿಕ ವಂಚನೆಯ ಬಗ್ಗೆ ತಿಳಿದುಬಂದು ನಾನು ದರ್ಶನ್ ಅವರೊಂದಿಗೆ ಮಾತುಕತೆ ನಡೆಸಿ ನಮ್ಮ ಸ್ನೇಹಿತರ ಹೆಸರು ಸೇರಿದಂತೆ ನಮ್ಮ ಹೆಸರನ್ನು ಬಳಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಜೂನ್ 16 ರಂದೇ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ.

ವಂಚನೆಯ ಬಗ್ಗೆ ನಾನು ಮತ್ತು ದರ್ಶನವರು ಕೂತು ಮಾತನಾಡಿ ಈ ಬಗ್ಗೆ ಮೈಸೂರಿನಲ್ಲಿ ದೂರು ದಾಖಲಿಸಿದರೆ ಒಳ್ಳೆಯದು ಎಂದು ಇಲ್ಲಿ ದೂರು ನೀಡಿದ್ದೇವೆ. ವಂಚನೆ ಮಾಡುತ್ತಿರುವ ಮಹಿಳೆ ಬಗ್ಗೆ 2 ತಿಂಗಳ ಹಿಂದೆ ನಮಗೆ ಗೊತ್ತಾಗಿದೆ. ಆಕೆಯನ್ನು ದರ್ಶನ್ ಅವರಿಗೆ ನಾನು ಪರಿಚಯ ಮಾಡಿರುವ ಸುದ್ದಿ ಸುಳ್ಳು. ನಾವು ಈ ಬಗ್ಗೆ ದೂರು ನೀಡಿದ್ದೇವೆ ಇದೀಗ ಮಹಿಳೆಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಮುಂದಿನ ವಿಚಾರ ತಿಳಿದುಬರಲಿದೆ ಎಂದರು. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ದರ್ಶನ್ ಬಳಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆ ಸೇರಿದಂತೆ ಇನ್ನಿಬ್ಬರ ಹೆಸರು ಎಫ್‍ಐಆರ್ ನಲ್ಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅರುಣಾ ಕುಮಾರಿ, ಮಧುಕೇಶವ ಮತ್ತು ನಂದೀಶ್ ಎಂಬವರ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ. ನಿರ್ಮಾಪಕ ಉಮಾಪತಿ ಗೆಳೆಯ ಹರ್ಷ ಮೆಲಂತಾ ನೀಡಿದ ದೂರಿನಡಿ ಈ ಮೂವರ ವಿರುದ್ಧ ದೂರು ದಾಖಲಾಗಿದೆ.

Comments

Leave a Reply

Your email address will not be published. Required fields are marked *