ನನ್ನ ಜೀವನದಲ್ಲಿ ನೀನು ಸ್ಪೆಷಲ್, ಬೇರೆ ಸ್ಥಾನವನ್ನೇ ಇಟ್ಟಿದ್ದೇನೆ: ದಿವ್ಯಾ ಸುರೇಶ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕೊನೆಯ ದಿನವನ್ನು ತುಂಬಾ ಭಾವನಾತ್ಮಕವಾಗಿ ಕಳೆದಿದ್ದು, ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಜೋಡಿ ಸಹ ಪರಸ್ಪರ ಮಾತನಾಡಿಕೊಂಡಿದ್ದಾರೆ. ನನ್ನ ಜೀವನದಲ್ಲಿ ನೀನು ಸ್ಪೆಷಲ್, ಬೇರೆ ಸ್ಥಾನವನ್ನೇ ಇಟ್ಟಿದ್ದೇನೆ ಎಂದೆಲ್ಲ ಹೇಳಿ ದಿವ್ಯಾ ಭಾವುಕರಾಗಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಕುಳಿತು ಇಬ್ಬರೂ ಮಾತನಾಡಿದ್ದು, ಲಾಕ್‍ಡೌನ್ ಆದ್ಮೇಲೆ ಸಿಗೋಣ, ಮನೆಗೆ ಬಾ, ಮನೆಯವರನ್ನೆಲ್ಲ ಪರಿಚಯ ಮಾಡಿಸುತ್ತೇನೆ, ಒಳ್ಳೆಯ ಸ್ನೇಹಿತರಾಗಿರೋಣ. ಮದುವೆಗೆಲ್ಲ ಕರಿ, ನಿನ್ನಂತಹ ಒಬ್ಬ ದಡ್ಡ ಶಿಖಾಮಣಿ ನನಗೆ ಫ್ರೆಂಡ್ ಆಗಿದ್ದಾನೆ ಎಂದು ನನಗೆ ಖುಷಿಯಾಗಿದೆ ಎಂದು ದಿವ್ಯಾ ಸುರೇಶ್ ಹೇಳುತ್ತಾರೆ. ಆಗ ಮಂಜು ಪಾವಗಡ ದಡ್ಡ ಅಂದುಬಿಟ್ಟಿಯಲ್ಲಾ ಕೊನೆಗೂ, ಎನ್ನುತ್ತಾರೆ. ದಿವ್ಯಾ ಕೋತಿ ಎಂದು ರೇಗಿಸುತ್ತಾರೆ.

ನೀನು ಇಷ್ಟು ದಿನ ನನ್ನನ್ನು ಸಹಿಸಿಕೊಂಡಿದ್ದಕ್ಕೆ ಥ್ಯಾಂಕ್ಯೂ, ಕೆಲವೊಂದು ಸಲ ಬೇರೆಯವರ ಮೇಲಿನ ಸಿಟ್ಟನ್ನು ನಿನ್ನ ಮೇಲೆ ಹಾಕುತ್ತಿದ್ದೆ. ನೀನ್ ಸ್ಪೆಷಲ್ ನನ್ನ ಜೀವನದಲ್ಲಿ, ನಿನಗೆ ಬೇರೆ ಸ್ಥಾನನೇ ಇಟ್ಟಿದ್ದೇನೆ. ಯಾವುದೇ ಸಂದರ್ಭದಲ್ಲಿ, ಯಾವುದೇ ದಿನ ಒಂದು ಕಾಲ್ ಮಾಡು ನಾನು ಇರುತ್ತೇನೆ, ಥ್ಯಾಂಕ್ಯೂ ಸೋ ಮಚ್ ಎಂದು ದಿವ್ಯಾ ಮಂಜುಗೆ ಹೇಳಿ ಭಾವುಕರಾಗಿದ್ದಾರೆ. ಆಗ ಮಂಜು ಸಹ ಮುಖ ಸಣ್ಣಗೆ ಮಾಡಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಬಳಿಕ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಜೋಡಿ ಬಿಗ್ ಬಾಸ್ ಮನೆಯಲ್ಲಿ ಭಾರೀ ಗಮನ ಸೆಳೆದಿತ್ತು. ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಪರಸ್ಪರ ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಯಾವುದೇ ಜಗಳ, ಖುಷಿ ವಿಚಾರ ಇದ್ದರೂ ಇಬ್ಬರೂ ಒಟ್ಟಿಗೇ ಕೂತು ಮಾತನಾಡುತ್ತಿದ್ದರು. ಹೀಗಾಗಿ ಇವರಿಬ್ಬರ ಕೆಮಿಸ್ಟ್ರಿ ಸಹ ಬಿಗ್ ಮನೆಯಲ್ಲಿ ಗಮನ ಸೆಳೆದಿತ್ತು. ಹೀಗಾಗಿ ಇದೀಗ ಮನೆಯಿಂದ ಹೊರ ಹೋಗುವ ಮುನ್ನ ಇಬ್ಬರೂ ಭಾವುಕರಾಗಿದ್ದಾರೆ. ದಿವ್ಯಾ ಸುರೇಶ್ ಮಂಜು ಅವರನ್ನು ಮನೆಗೆ ಕರೆದಿದ್ದಾರೆ.

ದಿವ್ಯಾ ಸುರೇಶ್ ಟಾಸ್ಕ್ ಸೇರಿದಂತೆ ಮನೆಯಲ್ಲಿ ಏನೇ ತಪ್ಪು ಮಾಡಿದರೂ ಮಂಜು ಸಮಾಧಾನ ಪಡಿಸುತ್ತಿದ್ದರು. ಟಾಸ್ಕ್ ಸಂದರ್ಭದಲ್ಲಿ ದಿವ್ಯಾ ಬಿಸ್ಕೆಟ್ ತಿಂದಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ ನೀಡಿದ್ದರು. ದಿವ್ಯಾ ಜೊತೆಗೆ ಆಟದ ಉಸ್ತುವಾರಿ ಹೊತ್ತಿದ್ದ ಮಂಜು ಹಾಗೂ ಕ್ಯಾಪ್ಟನ್ ಪಾಯಿಂಟ್ಸ್ ಗಳನ್ನು ಸಹ ಕಡಿತಗೊಳಿಸಿದ್ದರು. ಈ ವೇಳೆ ದಿವ್ಯಾ ಕಣ್ಣೀರು ಹಾಕಿದ್ದರು. ಆಗಲೂ ಮಂಜು ದಿವ್ಯಾಗೆ ಸಮಾಧಾನ ಹೇಳಿದ್ದರು.

Comments

Leave a Reply

Your email address will not be published. Required fields are marked *