ನನ್ನಿಂದಾದ ತಪ್ಪಿಗೆ ತಂದೆಯನ್ನ ಅಪಹಾಸ್ಯ ಮಾಡಿದ್ದು ಎಷ್ಟು ಸರಿ- ಹಾರ್ದಿಕ್ ಪಾಂಡ್ಯ ಪ್ರಶ್ನೆ

ಮುಂಬೈ: ನನ್ನಿಂದಾದ ತಪ್ಪಿಗೆ ತಂದೆಯನ್ನ ಅಪಹಾಸ್ಯ ಮಾಡಿದ್ದು ಎಷ್ಟು ಸರಿ ಎಂದು ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ, ‘ಕಾಫಿ ವಿಥ್ ಕರಣ್’ ವಿವಾದವನ್ನು ಮತ್ತೊಮ್ಮೆ ನೆನೆದಿದ್ದಾರೆ.

ಪ್ರಸ್ತುತ ಟೀಂ ತಂಡವು ಹೊಂದಿರುವ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರಾಗಿದ್ದಾರೆ. ಆಲ್‍ರೌಂಡರ್ ಹಾರ್ದಿಕ್ ಅಭಿಮಾನಿಗಳಿಗೆ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದರೂ ಟೀಕೆಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಆಫ್-ಫೀಲ್ಡ್ ನಡವಳಿಕೆಯಿಂದಾಗಿ ಟೀಕೆಗೆ ಗುರಿಯಾಗಿದ್ದಾರೆ. ಅಂತಹ ಒಂದು ಘಟನೆಯೆಂದರೆ ‘ಕಾಫಿ ವಿಥ್ ಕರಣ್’ ವಿವಾದ. ಈ ವಿವಾದದಿಂದಾಗಿ ಅವರನ್ನು ಕೆಲ ಕಾಲ ಟೀಂ ಇಂಡಿಯಾದಿಂದ ಅಮಾನತುಗೊಳಿಸಲಾಗಿತ್ತು. ಆ ಸಮಯವನ್ನು ಆಲ್‍ರೌಂಡರ್ ಹಾರ್ದಿಕ್ ಮತ್ತೊಮ್ಮೆ ನೆನೆದಿದ್ದಾರೆ. ಇದನ್ನೂ ಓದಿ: ‘ಕಾಫಿ ತುಂಬಾ ಕಾಸ್ಟ್ಲಿ, ಗ್ರೀನ್ ಟೀ ಮಾತ್ರ ಕುಡಿಯಿರಿ’

ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಅವರೊಂದಿಗಿನ ಲೈಲ್ ಚಾಟ್‍ನಲ್ಲಿ ಮಾತನಾಡಿದ ಹಾರ್ದಿಕ್ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅಂತಹ ಘಟನೆಯನ್ನು ಪುನರಾವರ್ತಿಸುವುದಿಲ್ಲ ಎಂದು ತಿಳಿಸಿದರು.

“ನಾನು ಕುಟುಂಬವನ್ನು ಪ್ರೀತಿಸುವ ವ್ಯಕ್ತಿ. ಕುಟುಂಬವಿಲ್ಲದೆ ನಾನು ಏನೂ ಅಲ್ಲ. ಕುಟುಂಬವೇ ನನ್ನ ಬೆನ್ನೆಲುಬು. ನೀವು ನೋಡುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ತೆರೆಮರೆಯಲ್ಲಿರುವ ಜನರು ನೋಡಿಕೊಳ್ಳುತ್ತಿದ್ದಾರೆ. ನಾನು ಮಾನಸಿಕವಾಗಿ ಸ್ಥಿರವಾಗಿದ್ದೇನೆ, ಸಂತೋಷವಾಗಿರುತ್ತೇನೆ ಅಂತ ಅವರು ಯಾವಾಗಲೂ ಖಚಿತಪಡಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

“ಕಾಫಿ ವಿಥ್ ಕರಣ್ ವಿವಾದವನ್ನು ಒಪ್ಪಿಕೊಳ್ಳಲು ಮತ್ತು ತಪ್ಪನ್ನು ಸರಿಪಡಿಸಲು ಪ್ರಯತ್ನಿಸಲು ಮುಂದಾಗಿದ್ದೆ. ಆಗ ಜನರು ನನ್ನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಘಟನೆ ಬಳಿಕ ನನ್ನ ತಂದೆ ಸಂದರ್ಶನವೊಂದರಲ್ಲಿ ಹೇಳಿದ ಮಾತಿಗೆ ಜನರು ಅಪಹಾಸ್ಯ ಮಾಡಿದರು. ನನ್ನಿಂದಾದ ತಪ್ಪಿಗೆ ಕುಟುಂಬವನ್ನು ದೂರುವುದು, ಅಪಹಾಸ್ಯ ಮಾಡುವುದು ಎಷ್ಟು ಸರಿ? ಅದು ಸ್ವೀಕಾರಾರ್ಹವಲ್ಲ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *