ನನಸಾಯ್ತು ‘ಕನಕಪುರ ಬಂಡೆ’ಯ ದಶಕಗಳ ಕನಸು- ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಡಿಕೆಶಿ ಪಟ್ಟಾಭಿಷೇಕ

ಬೆಂಗಳೂರು: ಡಿ.ಕೆ. ಶಿವಕುಮಾರ್ ಕೊನೆಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಘೋಷಣೆಯಾದ ಬಳಿಕ ಹಲವಾರು ಅಡೆತಡೆಗಳ ಬಳಿಕ ಇಂದು ಬೆಳಗ್ಗೆ 11.30ಕ್ಕೆ ಪದಗ್ರಹಣ ಸ್ವೀಕರಿಸಲಿದ್ದಾರೆ.

ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅಂದ್ರೆ ಡಿಕೆಶಿ. ಕಾಂಗ್ರೆಸ್ಸಿನ ಪ್ರಭಾವಿ ನಾಯಕರಲ್ಲಿ ಒಬ್ಬರು. ಕನಕಪುರದಿಂದ ಸತತವಾಗಿ ಗೆಲ್ಲುತ್ತಲೇ ವಿಧಾನಸೌಧಕ್ಕೆ ಎಂಟ್ರಿ ಕೊಡ್ತಿರೋ ಡಿಕೆಶಿ, ಇದೀಗ ಕಾಂಗ್ರೆಸ್ಸಿನ ಹೆಮ್ಮರವಾಗಿ ಬೆಳೆದಿದ್ದಾರೆ. ಪಕ್ಷದ ಅಧ್ಯಕ್ಷ ಗಾದಿಗೇರುವ ಡಿಕೆಶಿ ದಶಕಗಳ ಕನಸು ಈಗ ನನಸಾಗ್ತಿದೆ. ಹಲವಾರು ಅಡೆ-ತಡೆಗಳ ನಡುವೆ ಕೊನೆಗೂ ಡಿಕೆ ಶಿವಕುಮಾರ್ ಕೆಪಿಸಿಸಿ ಗದ್ದುಗೆ ಏರುತ್ತಿದ್ದಾರೆ. ಕಾಂಗ್ರೆಸ್ ಹೊಸ ಕಚೇರಿಯಲ್ಲಿ ಇಂದು ಅಧ್ಯಕ್ಷರಾಗಿ ಅಧಿಕೃತವಾಗಿ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ಪಾಲನೆಗಾಗಿ ಕೆಪಿಸಿಸಿ ಕಚೇರಿಯಲ್ಲಿ 150 ಮಂದಿ ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ವೇದಿಕೆಯ ಮೇಲೆ ಯಾರಿಗೂ ಆಸನದ ವ್ಯವಸ್ಥೆ ಇಲ್ಲ. ಭಾಷಣ ಮಾಡುವಾಗ ಮಾತ್ರ ನಾಯಕರು ವೇದಿಕೆ ಹತ್ತಲು ಅವಕಾಶ ಕಲ್ಪಿಸಲಾಗಿದೆ. ವೇದಿಕೆಯ ಮೇಲೆ 130 ಅಡಿ ಅಗಲದ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ.

ನೆಚ್ಚಿನ ನಾಯಕ ಅಪೂರ್ವ ಕಾರ್ಯಕ್ರಮ ವೀಕ್ಷಣೆಗೆ ಕೊರೊನಾ ಅಡ್ಡಿಯಾಗಿದ್ದರು ಕೂಡ ಅಭಿಮಾನಿಗಳಿಗಾಗಿ ಪ್ರತಿಜಿಲ್ಲೆಯ ಪಂಚಾಯ್ತಿ, ಬ್ಲಾಕ್, ವಾರ್ಡ್ ಮಟ್ಟದಲ್ಲಿ ಸುಮಾರು 7,800 ಸ್ಥಳಗಳಲ್ಲಿ ಎಲ್‍ಇಡಿ ಅಳವಡಿಸಲಾಗಿದೆ. ಜೊತೆಗೆ ಫೇಸ್‍ಬುಕ್ ಲೈವ್ ಮತ್ತು ಜೂಮ್ ಕಾನ್ಫರೆನ್ಸ್ ಮೂಲಕ 10 ಲಕ್ಷ ಮಂದಿ ಏಕಕಾಲದಲ್ಲಿ ಕಾರ್ಯಕ್ರಮ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗ್ಗೆ 10-30 ಕ್ಕೆ ಆರಂಭವಾಗೋ ಕಾರ್ಯಕ್ರಮಕ್ಕೆ ಡಿಕೆ. ಶಿವಕುಮಾರ್ 29-30 ಕ್ಕೆ ಆಗಮಿಸಲಿದ್ದಾರೆ. 20-45 ಕ್ಕೆ ಸೇವಾದಳದಿಂದ ಗೌರವ ರಕ್ಷೆಯನ್ನ ಸ್ವೀಕರಿಸಿ, 11 ಕ್ಕೆ ಸಾಮೂಹಿಕ ವಂದೇ ಮಾತರಂ ಹಾಡಲಿದ್ದಾರೆ. 12-03 ನಿಮಿಷಕ್ಕೆ ಸ್ವಾಗತ ಕೋರಿ, 12-07 ಕ್ಕೆ ಕೆಸಿ ವೇಣುಗೋಪಾಲ್ ಸಮಾರಂಭವನ್ನ ಉದ್ಘಾಟಿಸಲಿದ್ದಾರೆ. 11-10 ಕ್ಕೆ ಜ್ಯೋತಿ ಬೆಳಗ್ಗೆ 11-25 ಕ್ಕೆ ಸಂವಿಧಾನ ಪೀಠಿಕೆ ಪಠಣ ನಡೆಯಲಿದೆ. 11-20 ಕ್ಕೆ ವೇಣುಗೋಪಾಲ್‍ರಿಂದ ಉದ್ಘಾಟನಾ ಭಾಷಣ ನೆಡಯಲಿದ್ದು, 11-30ಕ್ಕೆ ಡಿ ಕೆ ಶಿವಕುಮಾರ್ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. 11-35ಕ್ಕೆ ದಿನೇಶ್ ಗುಂಡೂರಾವ್ ಡಿಕೆಶಿಗೆ ಅಧಿಕಾರ ಹಸ್ತಾಂತರಿಸಿ, 11-45ಕ್ಕೆ ಭಾಷಣ ಮಾಡಲಿದ್ದಾರೆ. ಇನ್ನು 11-55 ರಿಂದ 12-25 ರವರೆಗೆ ಅತಿಥಿಗಳು ಶುಭನುಡಿಗಳನ್ನಾಡಲಿದ್ದಾರೆ. 12-25 ಕ್ಕೆ ಡಿ.ಕೆ ಶಿವಕುಮಾರ್ ಭಾಷಣ ಮಾಡಲಿದ್ದು, 12.58ಕ್ಕೆ ವಂದನಾರ್ಪಣೆ ಮಾಡಿ ರಾಷ್ಟ್ರಗೀತೆಯನ್ನ ಹಾಡಲಾಗುತ್ತೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹಿನ್ನೆಲೆಯಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಮೂರು ಬಾರಿ ಅನುಮತಿ ನಿರಾಕರಣೆ ಮಾಡಲಾಗಿತ್ತು. ಆದರೆ ಅದು ರಾಜಕೀಯ ಆರೋಪ ಹಾಗೂ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಸಿಎಂ ಅನುಮತಿ ಕೊಟ್ಟರು ಈಗಲು ಪೊಲೀಸರು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಕಾಂಗ್ರೆಸ್ ಕಾರ್ಯಾಧ್ಯಕ್ಷರಿಗೆ ಕೆಲ ಜವಾಬ್ದಾರಿಗಳನ್ನ ನೀಡಲಾಗಿದೆ. ಕಾರ್ಯಕ್ರಮ ನಿರ್ವಹಣೆ, ಆಯೋಜನೆ, ಸಂಪರ್ಕದ ಜವಾಬ್ದಾರಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ವಹಿಸಲಾಗಿದೆ.

ಇದೆಲ್ಲದರ ನಡುವೆ ಕೈ ಪಡೆ ಮೇಲೆ ಸಾಮಾಜಿಕ ಜವಾಬ್ದಾರಿ ಕೂಡ ಇದೆ. ಮೊನ್ನೆಯ ಪ್ರತಿಭಟನೆಯಂತೆ ಜಾತ್ರೆ ಮಾಡದೆ, ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇದು ಸಾಧ್ಯವಾಗುತ್ತಾ ಅನ್ನೋದೆ ಸದ್ಯದ ಕುತೂಹಲ.

Comments

Leave a Reply

Your email address will not be published. Required fields are marked *