ನನಗೆ ಯಾವುದೇ ಆತಂಕವಿಲ್ಲ, ಕೋರ್ಟಿಗೆ ಅರ್ಜಿ ಹಾಕಲ್ಲ: ಎಂಟಿಬಿ

MTB 1

– ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ

ಬೆಂಗಳೂರು: ನಾನು ಕೊರ್ಟ್ ಮೊರೆ ಹೋಗಲ್ಲ. ನನಗೆ ಅಂತಹ ಯಾವುದೇ ಆತಂಕ ಇಲ್ಲ. ಹೀಗಾಗಿ ನಾನು ಕೋರ್ಟಿಗೆ ಅರ್ಜಿ ಹಾಕಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಸಚಿವರ ಸಿಡಿ ಹೊರಬರುತ್ತಿದ್ದಂತೆಯೇ ಆರು ಮಂದಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟಿಗೆ ಹೋಗುವ ವಿಚಾರದ ಬಗ್ಗೆ ನಾನು ಅವರ ಜೊತೆ ಚರ್ಚೆ ಮಾಡಿಲ್ಲ ಎಂದು ಎಂಟಿಬಿ ಹೇಳಿದರು.

ಇದೇ ವೇಳೆ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ ವಿಚಾರ ಪ್ರತಿಕ್ರಿಯಸಿ, ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಸೋಮಶೇಖರ್ ಎಷ್ಟರ ಮಟ್ಟಿಗೆ ಮಾಹಿತಿ ಕಲೆ ಹಾಕಿದಾರೋ ಗೊತ್ತಿಲ್ಲ. ಸೋಮಶೇಖರ್ ಬಳಿಯೇ ನೀವು ಕೇಳಬೇಕು. ನನಗೆ ಮಾಹಿತಿ ಇರುವ ಹಾಗೆ ಕಾಂಗ್ರೆಸ್ಸಿನಲ್ಲಿ ಹಾಗೇನಿಲ್ಲ ಎಂದರು.

ಸೋಮಶೇಖರ್ ಹೇಳಿದ್ದೇನು..?
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *