ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ

ಬೆಂಗಳೂರು: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಚೀಫ್ ಜಸ್ಟೀಸ್ ಆದೇಶ, ಸ್ವಾಮೀಜಿ ಮನವಿ ಮೇರೆಗೆ ಕ್ರಮ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣದ ಎ-57 ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಕೊನೆಗೂ ಬಂಧಿಸಲಾಗಿದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಖಂಡ, 3 ಜನ ಕಾರ್ಪೊರೇಟರ್‍ಗಳಿಗೂ ಶಿಕ್ಷೆ ಆಗಲೇಬೇಕು. ತಪ್ಪಿತಸ್ಥರಿಂದಲೇ ನಷ್ಟದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಪತ್ ರಾಜ್ ತಲೆಮರೆಸಿಕೊಂಡಿದ್ದರು. ಸಂಪತ್ ಹಿಡಿಯೋಕೆ ಸಿಸಿಬಿ ಪೊಲೀಸರು ಹೈರಾಣಾಗಿದ್ದು, ಇದೀಗ ಬರೋಬ್ಬರಿ ತಿಂಗಳ ಬಳಿಕ ಸಂಪತ್ ರಾಜ್ ನನ್ನು ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

ಅಖಂಡ ಮನೆಗೆ ಬೆಂಕಿ ಹಾಕಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಪತ್ ರಾಜ್ ಕೊರೊನಾ ಹಿನ್ನೆಲೆಯಲ್ಲಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ದಾಖಲಾಗಿದ್ದು, ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆ ಬಳಿಕ ನಾಗರಹೊಳೆ ತಮಿಳುನಾಡು, ಗೋವಾ ಹಾಗೂ ಬೆಂಗಳೂರು ಅಂತ ತಲೆ ಮರೆಸಿಕೊಳ್ಳುವ ಮೂಲಕ ಪದೇ ಪದೇ ಸ್ಥಳ ಬದಲಾಯಿಸ್ತಿದ್ದರು. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಎಸ್ಕೇಪ್ ಆಗುತ್ತಿದ್ದರು.

ಸಂಪತ್ ಪತ್ತೆ ಮಾಡದಿದ್ದಕ್ಕೆ ಹೈಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಇತ್ತೀಚೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಅಸಮಾಧಾನ ಹೊರ ಹಾಕಿದ್ದರು. ರಾಷ್ಟ್ರೀಯ ಅಧ್ಯಕ್ಷರೇ ನ್ಯಾಯ ಕೊಡಿಸಬೇಕು ಎಂದಿದ್ದರು. ಸದ್ಯ ಸಂಪತ್ ರಾಜ್ ನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ರಾತ್ರಿಯಿಡೀ ಪೊಲೀಸರು ಸಂಪತ್ ರಾಜ್ ನನ್ನು ಡ್ರಿಲ್ ಮಾಡಿದ್ದು, ಇಂದು ಮಧ್ಯಾಹ್ನದ ವೇಳೆ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *