ನಟಿ ಪ್ರಣೀತಾ ಹೆಸರಲ್ಲಿ ಲಕ್ಷ ಲಕ್ಷ ವಂಚನೆ – ರೂಮಿನೊಳಗೆ ಹೋಗ್ತೀವಿ ಎಂದು ಪರಾರಿ

ಬೆಂಗಳೂರು: ಹೇಗೆಲ್ಲಾ ವಂಚನೆ ಮಾಡುತ್ತಾರೆ ಎಂಬುದುಕ್ಕೆ ನಟಿ ಪ್ರಣೀತಾ ಪ್ರಕರಣ ಉದಾಹರಣೆಯಾಗಿದ್ದು, ಬ್ರಾಂಡ್ ಅಂಬಾಸೀಡರ್ ಮಾಡುವುದಾಗಿ ನಂಬಿಸಿ ಪ್ರಣೀತಾ ಹೆಸರಲ್ಲಿ ಖದೀಮರು ಎಸ್.ವಿ ಗ್ರೂಪ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಕಂಪನಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಬೆಂಗಳೂರಿನ ಖಾಸಗಿ ಹೋಟೇಲ್ ಗೆ ಎಸ್.ವಿ.ಗ್ರೂಪ್ ಮ್ಯಾನೇಜರ್ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು ನಾವು ನಟಿ ಪ್ರಣೀತಾಳ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ನಟಿಯನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ಡೀಲ್ ಕುದುರಿಸಿದ್ದಾರೆ. ನೀವು ಹಣ ನೀಡಿದರೆ ಪ್ರಣೀತಾ ಇನ್ನೊಂದು ಗಂಟೆಯಲ್ಲಿ ಬಂದು ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ನೀವು 13.5 ಲಕ್ಷ ರೂ. ಪಾವತಿಸಿ ಎಂದು ಹೇಳಿದ್ದಾರೆ. ಆರೋಪಿಗಳ ಮಾತು ನಂಬಿ ಮ್ಯಾನೇಜರ್ 13.5 ಲಕ್ಷ ರೂ. ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ರೂಮ್ ಒಳಗೆ ಹೋಗಿ ಬರೋದಾಗಿ ಹೇಳಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಪ್ರಕರಣ ನಡೆಯುತ್ತಿದ್ದಂತೆ ಸಂಸ್ಥೆಯ ಮ್ಯಾನೇಜರ್ ಆರೋಪಿಗಳಾದ ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಇದೀಗ ಎಫ್‍ಐಆರ್ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ?
ನಮ್ಮ ಸಂಸ್ಥೆಗೆ ಬ್ರಾಂಡ್ ಅಂಬಾಸೀಡರ್ ಹುಡುಕುತ್ತಿದ್ದಾಗ ಪ್ರಶಾಂತ್ ಅವರು ಪ್ರಣೀತಾ ಅವರ ಮ್ಯಾನೇಜರ್ ಎಂದು ಚೆನ್ನೈ ಮೂಲದ ಮಹಮ್ಮದ್ ಜೂನಾಯತ್ ಅವರನ್ನು ಪರಿಯಿಸಿದರು. ಬಳಿಕ ಮೊಹಮ್ಮದ್ ನಮ್ಮನ್ನು ಸಂಪರ್ಕಿಸಿದರು. ನಮ್ಮೊಂದಿಗೆ ಮಾತನಾಡಿ, ಬಳಿಕ ಹಣ ಪಡೆಯಲು ಬಂದಿದ್ದರು. ಅಲ್ಲದೆ ಹಣ ನೀಡಿದರೆ 20 ನಿಮಿಷಗಳಲ್ಲಿ ನಿಮ್ಮ ಕರಾರು ಪತ್ರ ತಯಾರುತ್ತದೆ ಎಂದು ಆರೋಪಿಗಳು ತಿಳಿಸಿದರು.

ಹೋಟೆಲಿನಲ್ಲಿ ನಮ್ಮ ಜೊತೆ ಮಾತನಾಡಿದ ಆರೋಪಿಗಳು, ಬಳಿಕ ಹಣ ಪಡೆದು ರೂಮ್ ಒಳಗಡೆ ಹೋಗಿದ್ದಾರೆ. ಒಂದು ಗಂಟೆ ಕಳೆದರೂ ಮರಳಿ ಬರಲಿಲ್ಲ. ನಂತರ ಹೋಟೆಲ್‍ನ ರೂಮ್‍ಗೆ ಹೋಗಿ ನೋಡಿದಾಗ ಮೊಹಮ್ಮದ್ ಜುನಾಯತ್ ಹಾಗೂ ವರ್ಷಾ ಇರಲಿಲ್ಲ. ಈ ವೇಳೆ ಮೊಹಮ್ಮದ್‍ಗೆ ಕರೆ ಮಾಡಿದೆ, ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಹಣ ಪಡೆದು ಪರಾರಿಯಾಗಿರುವುದು ತಿಳಿಯಿತು.

ತಕ್ಷಣವೇ ನಾನು ಪ್ರಶಾಂತ್‍ಗೆ ಕರೆ ಮಾಡಿದೆ. ನಂತರ ಪ್ರಶಾಂತ್ ಆರೋಪಿ ಮೊಹಮ್ಮದ್ ತಂದೆಗೆ ಕರೆ ಮಾಡಿದರು. ಆಗ ನನಗೆ ಗೊತ್ತಿಲ್ಲ ಅವನ ಬಳಿಯೇ ಹಣವಿದೆ. ನಮ್ಮ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಮೊಹಮ್ಮದ್ ತಂದೆ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೀಗಾಗಿ ನಂಬಿಸಿ ಮೋಸ ಮಾಡಿದ ಮೊಹಮ್ಮದ್, ವರ್ಷಾ ಹಾಗೂ ಇತರ ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.

Comments

Leave a Reply

Your email address will not be published. Required fields are marked *