ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ದಂಡು- ಮಾಸ್ಕ್ ಧರಿಸದವರಿಗೆ ಬಿತ್ತು ದಂಡ

– ವೀಕೆಂಡ್ ಮಸ್ತ್ ಮಜಾ, ಸುರಕ್ಷತಾ ಕ್ರಮ ಮರೆತರು
– ಕಾರು, ಬೈಕ್ ಗಳಲ್ಲಿ ಪ್ರವಾಸಿಗರ ಲಗ್ಗೆ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಅನ್‍ಲಾಕ್ 4 ಮಾರ್ಗಸೂಚಿ ಪ್ರಕರಟಿಸಿದ್ದು, ಪ್ರವಾಸಿ ತಾಣಗಳು ಹಾಗೂ ಮೆಟ್ರೊ ರೈಲು ಸಂಚಾರಕ್ಕೂ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ನಂದಿ ಗಿರಿಧಾಮವನ್ನು ಸಹ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಪ್ರವಾಸಿಗರು ಸಹ ನಂದಿ ಗಿರಿಧಾಮದಲ್ಲಿ ವೀಕೆಂಡ್ ಮಜಾ ಮಾಡುತ್ತಿದ್ದಾರೆ. ಆದರೆ ಎಷ್ಟೇ ಎಚ್ಚರಿಕೆ, ಅರಿವು ಮೂಡಿಸಿದರೂ ಕೊರೊನಾ ನಿಯಮ ಪಾಲಿಸುತ್ತಿಲ್ಲ. ಹೀಗೆ ಮಾಸ್ಕ್ ಧರಿಸಿದೇ ಆಗಮಿಸಿದ ಪ್ರವಾಸಿಗರಿಗೆ ದಂಡ ವಿಧಿಸಿ ಬುದ್ಧಿ ಕಲಿಸಲಾಗಿದೆ.

ಕೊರೊನಾ ಹಿನ್ನೆಲೆ ಆತಂಕದ ನಡುವೆ ನಂದಿ ಗಿರಿಧಾಮವನ್ನು ಇಂದು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಆದರೆ ಕೊರೊನಾ ನಿಯಮಗಳ ಪಾಲನೆಯನ್ನು ಮರೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಈ ರೀತಿ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವವರಿಗೆ ಬುದ್ಧಿ ಕಲಿಸಲಾಗುತ್ತಿದ್ದು, ದಂಡ ಹಾಕಲಾಗುತ್ತಿದೆ.

ಇಂದು ಬೆಳಗ್ಗೆ 8ಕ್ಕೆ ನಂದಿ ಗಿರಿಧಾಮದ ಚೆಕ್‍ಪೋಸ್ಟ್ ತೆಗೆದಿದ್ದೇ ತಡ ಮುಂಜಾನೆಯಿಂದಲೇ ಕಾತರದಿಂದ ಕಾಯುತ್ತಿದ್ದ ಪ್ರವಾಸಿಗರು, ನಂದಿ ಬೆಟ್ಟಕ್ಕೆ ಲಗ್ಗೆಯಿಟ್ಟರು. ಕೊರೊನಾ ಹರಡುವಿಕೆ ಹಿನ್ನೆಲೆ ಮಾರ್ಚ್ 14 ರಿಂದ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಮಾಡಿತ್ತು. ಸುಮಾರು 5 ತಿಂಗಳ ನಂತರ ಇಂದಿನಿಂದ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಳ್ಳಂ ಬೆಳಗ್ಗೆ ನೂರಾರು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿ ನಂದಿಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದರು. ಜಿಲ್ಲಾಡಳಿತ ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕೊರೊನಾ ನಿಯಮ ಪಾಲನೆ ಕಡ್ಡಾಯ ಮಾಡಿದೆ. ಆದರೆ ಪ್ರವಾಸಿಗರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸದವರಿಗೆ ತಲಾ 100 ರೂಪಾಯಿ ದಂಡ ವಿಧಿಸಿ ಬುದ್ಧಿ ಕಲಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

Comments

Leave a Reply

Your email address will not be published. Required fields are marked *