ಧಾರವಾಡದಲ್ಲಿ ರಕ್ತದ ಕೊರತೆ- ಗರ್ಭಿಣಿಯರಿಗೂ ಸಿಗುತ್ತಿಲ್ಲ ಬ್ಲಡ್

ಧಾರವಾಡ: ಜಿಲ್ಲೆಯಲ್ಲಿ ಯಾವುದೇ ಬ್ಲಡ್ ಬ್ಯಾಂಕ್ ಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಉತ್ತರ ಸಿಗುತ್ತಿದ್ದು, ಬಹುತೇಕ ಬ್ಲಡ್ ಬ್ಯಾಂಕ್ ಗಳು ದಾನಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಯುವ ಜನತೆ ರಕ್ತ ದಾನ ಮಾಡುತ್ತಿಲ್ಲ.

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಿದ ಬಳಿಕ ಜಿಲ್ಲೆಯಲ್ಲಿ ತೀರಾ ರಕ್ತದ ಕೊರತೆ ಉದ್ಭವಿಸಿದೆಯಂತೆ. ಮುಖ್ಯವಾಗಿ ರಕ್ತದಾನ ಮಾಡುವವರು ಇದೇ ವಯೋಮಾನದವರಾಗಿರುವ ಕಾರಣ ಈಗ ಲಸಿಕೆಯೇ ಮುಖ್ಯವಾಗಿದ್ದು, ರಕ್ತದಾನವನ್ನು ಎಲ್ಲರೂ ಮರೆಯುತ್ತಿದ್ದಾರೆ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯ ದೊಡ್ಡ ರಕ್ತ ಭಂಡಾರದಲ್ಲೇ ನಿತ್ಯ 2 ರಿಂದ 3 ಯುನಿಟ್ ಮಾತ್ರ ರಕ್ತ ಸಂಗ್ರಹ ಆಗುತ್ತಿದೆ.

ರಕ್ತದ ಕೊರತೆಯ ಪರಿಣಾಮ ಗರ್ಭೀಣಿಯರು ಹಾಗೂ ಥಲೆಸ್ಮಿಯಾ ರೋಗಿಗಳ ಮೇಲೆ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ. ಬೇರೆಲ್ಲ ಶಸ್ತ್ರಚಿಕಿತ್ಸೆಗಳ ಬೇಡಿಕೆ ಇಲ್ಲದಿದ್ದರೂ ಥಲೆಸ್ಮಿಯಾ ರೋಗಿಗಳಿಗೆ ನಿರಂತರವಾಗಿ ರಕ್ತ ಬೇಕಾಗಿರುವ ಕಾರಣಕ್ಕೆ ಅದು ನಿಶ್ಚಿತ ಬೇಡಿಕೆ. ಇದನ್ನೂ ಸರಿದೂಗಿಸಲು ಆಗುತ್ತಿಲ್ಲ. ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಸೇರಿ ಒಟ್ಟು 12ಕ್ಕೂ ಹೆಚ್ಚು ರಕ್ತ ಭಂಡಾರಗಳು ಧಾರವಾಡ ಜಿಲ್ಲೆಯಲ್ಲಿವೆ. ಆದರೆ ಎಲ್ಲಿಯೂ ರಕ್ತವೇ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮೊದಲು ಒಂದು ಮಸೇಜ್ ಮಾಡಿದರೆ ಜನ ತಾವಾಗಿಯೇ ಮುಂದೆ ಬಂದು ರಕ್ತದಾನ ಮಾಡುತ್ತಿದ್ದರು. ಆದರೆ ಈಗ ಹುಡುಕಾಡುವಂತಹ ಸ್ಥಿತಿ ಬಂದಿದ್ದು, ರಿಪ್ಲೇಸ್‍ಮೆಂಟಗೂ ಯಾರೂ ಸಿಗುತ್ತಿಲ್ಲ. ಕೊರೊನಾ ಲಸಿಕೆಗೂ ಮುಂಚೆಯೇ ರಕ್ತದಾನ ಮಾಡುವುದು ನಮ್ಮ ಕರ್ತವ್ಯ ಎಂದು ಜನ ಭಾವಿಸಬೇಕಿದೆ. ಅಂದಾಗಲೇ ರಕ್ತದ ಕೊರತೆ ನೀಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *