ದೇವಸ್ಥಾನಕ್ಕೆ ಹೋಗಿದ್ದಾಗ ವೃದ್ಧೆ ನೀರು ಪಾಲು- ಮಹಾಮಳೆಗೆ ಕಾಫಿನಾಡಿನಲ್ಲಿ ಮೂರನೇ ಬಲಿ

– ಕಾಲು ಜಾರಿ ಬಿದ್ದು ವೃದ್ಧೆ ಸಾವು

ಚಿಕ್ಕಮಗಳೂರು: ದೇವಸ್ಥಾನಕ್ಕೆ ಹೋಗಿದ್ದ ವೇಳೆಯಲ್ಲಿ ಕಾಲು ಜಾರಿ ಬಿದ್ದು ವೃದ್ಧೆ ನೀರು ಪಾಲಾದ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರದ ಅಗ್ರಹಾರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಹೇಮಾವತಿ ನದಿ ಪ್ರವಾಹಕ್ಕೆ ವೃದ್ಧೆ ರುದ್ರಮ್ಮ(87) ಕೊಚ್ಚಿ ಹೋಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ. ಮೂಡಿಗೆರೆ ಹೇಮಾವತಿ ನದಿ ಪ್ರವಾಹಕ್ಕೆ ವೃದ್ಧೆ ಕೊಚ್ಚಿ ಹೋಗಿದ್ದು, ಗೋಣಿಬೀಡು ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುಮಾರು 1 ಕಿ.ಮೀ. ದೂರದ ವರೆಗೆ ವೃದ್ಧೆ ಕೊಚ್ಚಿಕೊಂಡು ಹೋಗಿದ್ದು, ನಂತರ ಮರಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. 2-3 ಗಂಟೆಗಳ ಕಾಲ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಬಳಿಕ ವೃದ್ಧೆಯ ಮೃತ ದೇಹ ಪತ್ತೆಯಾಗಿದೆ.

ಬೆಳಗ್ಗೆಯಷ್ಟೆ ಹಳ್ಳದಲ್ಲಿ ಕೊಚ್ಚಿ ಹೋಗಿ ಓರ್ವ ವ್ಯಕ್ತಿ ಬಲಿಯಾಗಿದ್ದ. ಶೃಂಗೇರಿ ಸಮೀಪದ ನೆಮ್ಮಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಬಳಿ ಘಟನೆ ನಡೆದಿತ್ತು. ವಾಸುದೇವ ಭಟ್ಟ (54)ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಹಳ್ಳದಲ್ಲಿಯೇ ಸಿಲುಕಿದ್ದ ಮೃತ ದೇಹ ಪತ್ತೆಯಾಗಿತ್ತು. ನಂತರ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *