ದೆಹಲಿಯಿಂದ ಒತ್ತಡ ಇಲ್ಲ, ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ: ಬಿಎಸ್‍ವೈ

– ರಾಜ್ಯಪಾಲರಾಗ್ತಾರಾ ಬಿ.ಎಸ್.ಯಡಿಯೂರಪ್ಪ?
– ಬುಧವಾರ ಬಿಜೆಪಿ ಶಾಸಕರ ಸಭೆ

ಬೆಂಗಳೂರು: ನನಗೆ ಕೇಂದ್ರ ನಾಯಕರಿಂದ ಯಾವುದೇ ಒತ್ತಡ ಬಂದಿಲ್ಲ. ಹೊಸಬರಿಗೆ ಅವಕಾಶ ಸಿಗಬೇಕೆಂದು ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹಂಗಾಮಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಎರಡು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕೇಂದ್ರದ ನಾಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದಿನ ಸಿಎಂಗೆ ಯಾರ ಹೆಸರನ್ನು ಸೂಚಿಸಿಲ್ಲ ಮತ್ತು ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರಾಗ್ತಾರಾ ಬಿಎಸ್‍ವೈ?:
ಸಿಎಂ ಸ್ಥಾನದ ರಾಜೀನಾಮೆ ಬಳಿಕ ರಾಜ್ಯಪಾಲರಾಗ್ತೀರಾ ಪ್ರಶ್ನೆಗೆ ಉತ್ತರಿಸಿದರು. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿಯವರು ಕೇಂದ್ರ ಸಚಿವ ಸ್ಥಾನದ ಅವಕಾಶ ನೀಡಿದ್ರೂ ಹೋಗಿಲ್ಲ. ರಾಜ್ಯಪಾಲನಾಗಿ ಯಾವ ರಾಜ್ಯಕ್ಕೂ ಹೋಗಲ್ಲ. ರಾಜಕೀಯ ನಿವೃತ್ತಿಯೂ ಪಡೆಯಲ್ಲ. ಇಲ್ಲಿಯೇ ಇದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದರು.

ಯಾವುದೇ ಹೇಳಿಕೆ ನೀಡಬೇಡಿ:
ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದ್ರೆ ಸರ್ಕಾರ ಎರಡು ವರ್ಷ ಪೂರೈಸಿದ ದಿನವೇ ರಾಜೀನಾಮೆ ಸಲ್ಲಿಸೋದು ಸೂಕ್ತ ಅನ್ನಿಸಿತು. ರಾಷ್ಟ್ರೀಯ ನಾಯಕರು, ರಾಜ್ಯದ ಜನತೆ, ಪಕ್ಷದ ಕಾರ್ಯಕರ್ತರು ನನ್ನ ಮೇಲಿರಿಸಿದ್ದ ವಿಶ್ವಾಸವನ್ನ ಎಂದಿಗೂ ಮರೆಯಲ್ಲ. ಅನೇಕ ಸಾಧು-ಸಂತರು ಬಂದು ನನ್ನ ಮೇಲೆ ವಿಶ್ವಾಸ ಇರಿಸಿದ್ದಕ್ಕೆ ನಮಸ್ಕಾರ ಹೇಳುತ್ತೇನೆ. ಇಂದಿನಿಂದ ಸ್ವಾಮೀಜಿಗಳು ಯಾವುದೇ ಹೇಳಿಕೆ ನೀಡದಂತೆ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಈ ಎಲ್ಲ ಬೆಳವಣಿಗೆಯ ನಡುವೆ ಬುಧವಾರವೇ ಬಿಜೆಪಿ ಶಾಸಕರ ಸಭೆ ನಿಗದಿಯಾಗಿದ್ದು, ಅಂದೇ ನೂತನ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸಂಭ್ರಮದ ದಿನದಂದೇ ನೋವಿನ ವಿದಾಯ:
75 ವರ್ಷ ವಯಸ್ಸಾಗಿದ್ರೂ ಪಕ್ಷ ನನಗೆ ಸಿಎಂ ಸ್ಥಾನ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ರಾಜೀನಾಮೆಯನ್ನು ನೋವಿನಂದಲ್ಲ, ಸಂತೋಷದಿಂದ ನೀಡುತ್ತಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಕೇಂದ್ರದ ನಾಯಕರು ಅಪೇಕ್ಷೆ ಹೊಂದಿದ್ದಾರೆ. ಮೋದಿ, ನಡ್ಡಾ ಮತ್ತು ಶಾ ಅವರಿಗೆ ಪದಗಳಲ್ಲಿ ಅಭಿನಂದನೆ ಸಲ್ಲಿಸಲು ಆಗಲ್ಲ. ಮತ್ತೆ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವರಾಗುವಂತೆ ವಾಜಪೇಯಿ ಹೇಳಿದ್ದನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭವನ್ನು ಮೆಲುಕು ಹಾಕಿದ ಅವರು, ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿದ ನಾನು, ಶಿವಮೊಗ್ಗದ ಶಿಕಾರಿಪುರದಿಂದ ರಾಜಕೀಯ ಜೀವನ ಆರಂಭಿಸಿದೆ. ಅಂದು ಮೊದಲ ಬಾರಿಗೆ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದೇವು. ಆದ್ರೆ ನನ್ನ ಜೊತೆಯಲ್ಲಿದ್ದ ಮತ್ತೊಬ್ರು ರಾಜೀನಾಮೆ ನೀಡಿದಾಗ ಏಕಾಂಗಿಯಾಗಿ ಹೋರಾಟ ನಡೆಸಿದ್ದೇನೆ. ಅಂದು ಆಯೋಜಿಸಿದ ಕಾರ್ಯಕ್ರಮಗಳನ್ನು ನೋಡಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ಹೇಳಿದರು. ಇದನ್ನೂ ಓದಿ: ಉತ್ತರ ಕರ್ನಾಟಕದ ಲಿಂಗಾಯತ ಶಾಸಕರಿಗೆ ಸಿಎಂ ಸ್ಥಾನ!

ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ರಚನೆಯಾಗಿತ್ತು. ಅಂದು ವಾಜಪೇಯಿ ಅವರು ಕೇಂದ್ರದ ಸಚಿವರಾಗುವಂತೆ ಹೇಳಿದ್ದರು. ಇಲ್ಲ ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ದೆಹಲಿ ರಾಜಕಾರಣಕ್ಕೆ ಬರಲ್ಲ ಅಂತ ವಿನಮ್ರದಿಂದ ಹೇಳಿದೆ ಎಂದು ಹೇಳಿ ಭಾವುಕರಾದರು. ಇದನ್ನೂ ಓದಿ: ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ಬಿ.ಎಸ್.ಯಡಿಯೂರಪ್ಪ

Comments

Leave a Reply

Your email address will not be published. Required fields are marked *