ದೆಹಲಿಯಲ್ಲಿ ಸೀಕ್ರೆಟ್ ಮಿಷನ್ ಆರಂಭಿಸಿದ್ರಾ ಸಿ.ಪಿ ಯೋಗೇಶ್ವರ್?

ನವದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪಟ ರಚನೆಯಾಗಿದ್ದು, ಇದರಿಂದ ಕೆಲವರು ಅಸಮಾಧಾನಗೊಂಡಿದ್ದಾರೆ. ಇದೀಗ ಅಸಮಾಧಾನಿತ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ದೆಹಲಿಗೆ ಬಂದಿಳಿದಿದ್ದಾರೆ.

ಹೌದು. ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಮೊದಲ ಬಾರಿಗೆ ದೆಹಲಿಗೆ ಬಂದಿರುವ ಸಿ.ಪಿ ಯೋಗೇಶ್ವರ್, ಕರ್ನಾಟಕ ಭವನಕ್ಕೆ ತೆರಳಿದ್ದಾರೆ. ಇಂದು ಅವರು ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆಗಳಿವೆ. ಅಲ್ಲದೆ ಹೈಕಮಾಂಡ್ ಬಳಿ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಅಸಮಾಧಾನ ಹೊರ ಹಾಕುವ ಸಾಧ್ಯತೆ ಕೂಡ ದಟ್ಟವಾಗಿದೆ.

ಇದೇ ವೇಳೆ ಸಿಪಿವೈ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವಕೀಲರ ಭೇಟಿಗೆ ಬಂದಿರುವುದಾಗಿ ಹೇಳುವ ಮೂಲಕ ದೆಹಲಿ ಭೇಟಿ ಬಗ್ಗೆ ಗೌಪ್ಯತೆ ಬಿಟ್ಟು ಕೊಡಲು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸೈನಿಕ, ದೆಹಲಿಯಲ್ಲಿ ಸೀಕ್ರೆಟ್ ಮಿಷನ್ ಆರಂಭಿಸಿದ್ರಾ ಅನ್ನೋ ಅನುಮಾನವೊಂದು ಎದ್ದಿದೆ.

ಇತ್ತ ಹೈಕಮಾಂಡ್ ಒಂದು ವೇಳೆ ಸಿ.ಪಿ ಯೋಗೇಶ್ವರ್ ಭೇಟಿಗೆ ಸಮಯ ನೀಡಿದ್ದಲ್ಲಿ ದೆಹಲಿಗೆ ಬರುವ ಅಸಮಾಧಾನಿತರ ಸಂಖ್ಯೆ ಹೆಚ್ಚಳವಾಗಲಿದೆ. ಸಚಿವ ಸ್ಥಾನ ಸಿಗದ ನಾಯಕರು ಪದೇ ಪದೇ ಹೈಕಮಾಂಡ್ ಭೇಟಿಯಾಗುವ ಬೆಳವಣಿಗೆ ಹೆಚ್ಚಾಗಬಹುದು. ಈ ಹಿನ್ನೆಲೆ ಹೈಕಮಾಂಡ್ ಅವಕಾಶ ನೀಡುತ್ತಾ..? ಇಲ್ವಾ..? ಅನ್ನೋದು ಕುತೂಹಲ ಹುಟ್ಟಿದೆ. ಇದನ್ನೂ ಓದಿ: ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್..!

ಒಟ್ಟಿನಲ್ಲಿ ಯೋಗೇಶ್ವರ್ ಗೆ ಅವಕಾಶ ಕೊಟ್ಟಲ್ಲಿ ಮತ್ತಷ್ಟು ಶಾಸಕರು ದೆಹಲಿಗೆ ಆಗಮಿಸುವ ಸಾಧ್ಯತೆ ಇದ್ದು, ಈ ಗೊಂದಲಕ್ಕೆ ವರಿಷ್ಠರು ಆಸ್ಪದ ಮಾಡಿಕೊಡುತ್ತಾರಾ ಅಥವಾ ಯೋಗೇಶ್ವರ್ ಭೇಟಿಗೆ ನಿರಾಕರಿಸಿ ಸ್ಪಷ್ಟ ಸಂದೇಶ ರವಾನಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *