ದುಡಿದ ವೇತನವೇ ಕೊಟ್ಟಿಲ್ಲ, ಹಬ್ಬ ಮಾಡದೇ ಬೀದಿಯಲ್ಲಿದ್ದೇವೆ- ಕೋಡಿಹಳ್ಳಿ ಆಕ್ರೋಶ

ಬೆಂಗಳೂರು: ಕೆಲಸ ಮಾಡದೇ, ಮುಷ್ಕರ ನಡೆಸುತ್ತಿರುವುದಕ್ಕೆ ಸರ್ಕಾರ ಸಂಬಳ ನೀಡಿಲ್ಲ. ಹೀಗಾಗಿ ಹಬ್ಬ ಮಾಡದೇ ಬೀದಿಯಲ್ಲಿ ಇದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಗಾಂಧಿನಗರದ ತಮ್ಮ ಕಚೇರಿ ಬಳಿಯೇ ಭಿಕ್ಷಾಟನೆ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದುಡಿದ ವೇತನವೇ ಕೊಟ್ಟಿಲ್ಲ, ಹಬ್ಬ ಮಾಡದೇ ಬೀದಿಯಲ್ಲಿ ಇದ್ದೇವೆ. ಯುಗಾದಿ ಹಬ್ಬದ ಸಂಭ್ರಮ ಸಾರಿಗೆ ನೌಕರರಿಗಿಲ್ಲ. ವೇತನ ನೀಡದೇ ಸರ್ಕಾರ ಸತಾಯಿಸುತ್ತಿದೆ. ವೇತನ ನೀಡುವುದಿಲ್ಲ ಎಂದು ಸಿಎಂ ಹೇಳುವುದು ಸರಿಯಲ್ಲ. ವೇತನ ನೀಡದ್ದಕ್ಕೆ ಡಿಪೋ ಮ್ಯಾನೇಜರ್ ವಿರುದ್ಧ ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರು ದಾಖಲಿಸಿದ್ದಾರೆ. ಇದೇ ರೀತಿ ರಾಜ್ಯದೆಲ್ಲೆಡೆ ವೇತನ ನೀಡಿಲ್ಲ ಎಂದು ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದರು.

ಸಾರಿಗೆ ಬಸ್ ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ ಚಾಲಕರ ಮೂಲಕ ಬಸ್ ಓಡಿಸುವುದು ಸಕ್ಸಸ್ ಆಗುವುದಿಲ್ಲ, ಅದೆಷ್ಟೇ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ. ನೌಕರರು 1 ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವುದಿಲ್ಲ ಎಂಬ ಸಿಎಂ ಹೇಳಿಕೆ ದೌರ್ಜನ್ಯದ ಪರಮಾವಧಿ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು. ಸಿಎಂ ಇನ್ನೊಮ್ಮೆ ಪರಿಶೀಲಿಸಲಿ, ಸರ್ಕಾರ ನೀಡಿದ ವಾಗ್ದಾನವಿದು. 6ನೇ ವೇತನ ನಮ್ಮ ಬೇಡಿಕೆಯೇ ಆಗಿರಲಿಲ್ಲ. ಅವರೇ ಭರವಸೆ ನೀಡಿದ್ದರು, ಇದೀಗ ಮೊಂಡುವಾದ ಮಾಡುವುದು ಸರಿಯಲ್ಲ. ನ್ಯಾಯವಾದ ದಾರಿಯಲ್ಲಿ ಬರಬೇಕು ಎಂದು ಹೇಳಿದರು.

ಸಾರಿಗೆ ನೌಕರರ ಮುಷ್ಕರಕ್ಕೆ ಹೋಗದಂತೆ ಕೋಡಿಹಳ್ಳಿ ಚಂದ್ರಶೇಖರ್ ಗೆ ಪೊಲೀಸರು ದಿಗ್ಬಂಧನ ಹಾಕಿದರು. ಗಾಂಧಿನಗರದ ಕೋಡಿಹಳ್ಳಿ ಕಚೇರಿಯ ಮುಂದೆ 5 ಪೊಲೀಸ್ ಜಿಪ್ ಗಳಲ್ಲಿ ದಿಗ್ಬಂಧನ ಹಾಕಲಾಗಿತ್ತು. ಕಚೇರಿಯಿಂದ ಹೊರ ಹೋಗಲು ಬಿಡಲಿಲ್ಲ. ಈ ಹಿನ್ನೆಲೆ ಗಾಂಧಿನಗರದ ಕಚೇರಿಯಲ್ಲೇ ಸಾರಿಗೆ ನೌಕರರು ಹಾಗೂ ಕೋಡಿಹಳ್ಳಿ ಭಿಕ್ಷಾಟನೆ ನಡೆಸಿ, ಪ್ರತಿಭಟಿಸಿದರು.

Comments

Leave a Reply

Your email address will not be published. Required fields are marked *