ದಾವಣಗೆರೆ ಬೀರಲಿಂಗೇಶ್ವರ ದೇಗುಲ ಪೂಜೆ ವಿವಾದ – ಬೇರೆ ಪೂಜಾರಿ ಬೇಡವೆಂದ ಹಳೆ ಪೂಜಾರಿ

ದಾವಣಗೆರೆ: ಇಲ್ಲಿನ ಬೀರಲಿಂಗೇಶ್ವರ ದೇಗುಲದ ಪೂಜೆ ವಿವಾದ ಸದ್ಯ ಮುನ್ನೆಲೆಗೆ ಬಂದಿದ್ದು, ಹೊಸ ಪೂಜಾರಿ ಬೇಡ ಹಳೆ ಪೂಜಾರಿಯಿಂದಲೇ ಪೂಜೆ ಆರಂಭಿಸಬೇಕು ಎಂದು ಪಟ್ಟು ಹಿಡಿಯಲಾಗಿದೆ.

ದೇವಸ್ಥಾನದ ಆಸ್ತಿ ವಿಚಾರವಾಗಿ ಹೈಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಬೀಗ ಜಡಿಯಲಾಗಿತ್ತು. ಇದೀಗ ಬೇರೆ ಪೂಜಾರಿಯ ತಂದು ಪೂಜೆ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ನಿರ್ಧಾರಕ್ಕೆ ಹಳೇ ಪೂಜಾರಿ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇವಸ್ಥಾನದ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ಇರುವ ಈ ದೇವಸ್ಥಾನದಲ್ಲಿ ಪೂಜೆ ಆರಂಭಿಸುವಂತೆ ದೇವಸ್ಥಾನದ ಸಮಿತಿಯಿಂದ ಆಗ್ರಹಿಸಿದೆ. ಆದರೆ ಬೇರೆ ಪೂಜಾರಿಗಳಿಂದ ಪೂಜೆ ಬೇಡ ಎಂದು ಹಳೇ ಪೂಜಾರಿ ಆಗ್ರಹ ಮಾಡಿದ್ದಾರೆ. ಎರಡು ಗುಂಪುಗಳಿಂದ ದೇವಸ್ಥಾನದ ಎದುರು ಧರಣಿ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಜಿಲ್ಲಾಡಳಿತ ಕೂಡ ದೇವಸ್ಥಾನದ ಬೀಗ ತೆಗೆಯದೇ ಕಾಯ್ದು ಕುಳಿತಿದೆ.

ಈ ಮಧ್ಯೆ ಪೊಲೀಸರ ಎದುರೇ ಎರಡು ಗುಂಪುಗಳ ಗಲಾಟೆ ಏರ್ಪಟ್ಟಿದ್ದು, ಎರಡು ಗುಂಪುಗಳ ನೂಕಾಟ ತಳ್ಳಾಟ ನಡೆದಿದೆ. ಪೂಜೆಗೆ ಅವಕಾಶ ನೀಡದಂತೆ ಪೂಜಾರಿಗಳು ಪಟ್ಟು ಹಿಡಿದಿದ್ದಾರೆ. ಸದ್ಯ ಎರಡು ಗುಂಪುಗಳನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *