ದಾಖಲಾಗಿದ್ದ ವ್ಯಕ್ತಿ ನಾಪತ್ತೆ ಅಂದ್ರು ಆಸ್ಪತ್ರೆ ಸಿಬ್ಬಂದಿ – ಚರಂಡಿಯಲ್ಲಿ ಸೋಂಕಿತನ ಶವ ಪತ್ತೆ!

– ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು
– ಸಾವಿನ ವಿಷಯ ತಿಳಿಯದೇ ತಂದೆಗಾಗಿ ಮಗನ ಹುಡುಕಾಟ

ಚಾಮರಾಜನಗರ: ಜಿಲ್ಲಾ ಆಸ್ಪತ್ರೆ ಮರಣಕೂಪವಾಗಿ ಬದಲಾಗುತ್ತಿದೆ. ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯ ಮೃತದೇಹ ರಸ್ತೆ ಬದಿ ಪತ್ತೆಯಾಗಿರುವ ಅಮಾನವೀಯ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಆಲ್ದೂರು ಗ್ರಾಮದ ಸುರೇಶ್ ಕೊರೊನಾ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಬೆಳಗ್ಗೆಯಿಂದಲೇ ಸುರೇಶ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹಾಗಾಗಿ ಸುರೇಶ್ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಆಗಮಿಸಿ ಸುರೇಶ್ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದ್ರೆ ಸಿಬ್ಬಂದಿ ರೋಗಿ ಬೆಳಗ್ಗೆಯಿಂದಲೇ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲೂ ಸರಿಯಾಗಿ ಮಾಹಿತಿ ಸಿಗದಿದ್ದಾಗ ಕುಟುಂಬ ಮಾಧ್ಯಮಗಳ ಬಳಿ ಸಹಾಯ ಕೇಳಿತ್ತು.

ಏಪ್ರಿಲ್ 26ರಂದು ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಏಪ್ರಿಲ್ 30ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ನಿನ್ನೆ ಫೋನ್ ನಲ್ಲಿ ಮಾತನಾಡಿದ್ದೇನೆ. ಇಂದು ಬೆಳಗ್ಗೆ 7.30ಕ್ಕೆ ಸಹ ನಮ್ಮ ಜೊತೆ ಮಾತನಾಡಿದ್ದರು. ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟ ತಂದುಕೊಟ್ಟರೆ ತೊಗೊಂಡು ಹೋದರು. ಮಧ್ಯಾಹ್ನ ಬಂದು ಕೇಳಿದ್ರೆ ನಿಮ್ಮ ತಂದೆ ಇಲ್ಲ ರಾತ್ರಿಯೇ ಹೋದ್ರು ಅಂತ ಹೇಳ್ತಿದ್ದಾರೆ ಎಂದು ಮಗ ಕಣ್ಣೀರು ಹಾಕುತ್ತಿದ್ದಾನೆ. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ– ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ

ಇಂದು ಮಧ್ಯಾಹ್ನ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಸಿಕ್ಕ ಅನಾಥ ಶವದ ಫೋಟೋವನ್ನ ಮಾಧ್ಯಮದ ಸಿಬ್ಬಂದಿ ಕುಟುಂಬಸ್ಥರಿಗೆ ತೋರಿಸಿದ್ದಾರೆ. ಫೋಟೋ ನೋಡುತ್ತಲೇ ಕುಸಿದ ಮಹಿಳೆ, ಅಪ್ಪಾ ಇವರೇ ನನ್ನ ಗಂಡ ಅಂತ ಕುಸಿದು ಹಣೆ ಚಚ್ಚಿಕೊಂಡು ಕಣ್ಣೀರು ಹಾಕಲಾರಂಭಿಸಿದ್ರು. ಪೊಲೀಸರು ಕೋವಿಡ್ ಸೋಂಕಿತನ ಶವ ಎಂದು ತಿಳಿಯದೇ ಯಾವುದೇ ಕೊರೊನಾ ನಿಯಮ ಪಾಲಿಸದೇ ಮೃತದೇಹವನ್ನ ಶವಾಗರದಲ್ಲಿರಿಸಿದ್ದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

Comments

Leave a Reply

Your email address will not be published. Required fields are marked *