ಥಿಯೇಟರ್‌ಗಳಲ್ಲಿ ಹೌಸ್‍ಫುಲ್‍ಗೆ ಗ್ರೀನ್ ಸಿಗ್ನಲ್ – ‘ಯುವರತ್ನ’ ಧನ್ಯವಾದ

ಬೆಂಗಳೂರು: ಥಿಯೇಟರ್ ಗಳಲ್ಲಿ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅಭಿಮಾನಿ ವರ್ಗ, ಚಲನಚಿತ್ರ ಮಂಡಳಿಯ ಸಹೋದ್ಯೋಗಿಗಳಿಗೆ ಅಪ್ಪು ಥ್ಯಾಂಕ್ಸ್ ಹೇಳಿದ್ದಾರೆ. ಅಲ್ಲದೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

ಅಪ್ಪು ಹೆಳಿದ್ದೇನು..?
ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕದ ಸರ್ಕಾರದವರು, ಎಲ್ಲಾ ಪ್ರೀತಿಯ ಅಭಿಮಾನಿಗಳು, ಕರ್ನಾಟಕದ ಜನತೆ, ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು. ನಮಗೆ 3-4 ದಿನ ಕಾಲಾವಖಾಶ ಸಿಕ್ಕಿದೆ. ಈಗಾಗಲೇ ನೀವೇಲ್ಲರೂ ಕುಟುಂಬ ಸಮೇತರಾಗಿ ಸಿನಿಮಾ ನೋಡಿದ್ದೀರಿ, ಇಷ್ಟ ಪಟ್ಟಿದ್ದೀರಿ. ಈ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದೀರಿ. ಅದೇ ರೀತಿ ನಾಳೆಯಿಂದ ಮೂರು ದಿನ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ಇದೆ. ಹೀಗಾಗಿ ತಾವೆಲ್ಲರೂ ಹುಷಾರಾಗಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಿನಿಮಾ ನೋಡಿ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಎಂದು ಹೇಳಿದ್ದಾರೆ.

ಇಂದು ನಟ ಪುನಿತ್ ನೇತೃತ್ವದಲ್ಲಿ ಯುವರತ್ನ ಚಿತ್ರತಂಡ ಸಿಎಂ ಬಿಎಸ್‍ವೈ ಭೇಟಿ ಮಾಡಿ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಆದೇಶ ಹೊರಬಿದ್ದಿದೆ. ಬೆಂಗಳೂರು ಸೇರಿ 8 ಜಿಲ್ಲೆಗಳ ಥೇಟರ್ ಗಳಲ್ಲಿ ಎಂದಿನಂತೆ ಸಿನಿಮಾ ಪ್ರದರ್ಶನಗಳು ನಡೆಯಲಿವೆ. ಏಪ್ರಿಲ್ 7ರಿಂದ ಥೇಟರ್ ಹೌಸ್‍ಫುಲ್‍ಗೆ ನಿರ್ಬಂಧ ಹೇರಲಾಗುತ್ತದೆ. ಟಿಕೆಟ್ ಮುಂಗಡ ಬುಕ್ಕಿಂಗ್ ಆಗಿದ್ದ ಕಾರಣ, ಪ್ರೇಕ್ಷಕರಿಗೆ, ನಿರ್ಮಾಪಕರಿಗೆ ಸಮಸ್ಯೆ ಆಗಬಾರದು ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಪರಿಷ್ಕೃತ ಆದೇಶ ಹೊರಡಿಸಿದೆ.

ಇದಕ್ಕೂ ಮುನ್ನ, ಥೇಟರ್ ಹೌಸ್‍ಫುಲ್‍ಗೆ ಬ್ರೇಕ್ ಹಾಕಿರೋದನ್ನು ಖಂಡಿಸಿ ಅಪ್ಪು ಅಭಿಮಾನಿಗಳು ಸಿಡಿದೆದ್ದು, ಫಿಲಂ ಚೇಂಬರ್ ಮುಂದೆ ಪ್ರತಿಭಟನೆ ನಡೆಸಿದ್ರು. ತುರ್ತು ಸಭೆ ನಡೆಸಿದ ಫಿಲಂ ಚೇಂಬರ್, ಇದು ಪೂರ್ವನಿಯೋಜಿತ ಷಡ್ಯಂತ್ರ್ಯ ಎಂದು ಆರೋಪಿಸಿತ್ತು. ಕೂಡ್ಲೇ ಆದೇಶ ಹಿಂಪಡೆಯಲು ಸಿಎಂಗೆ ಮನವಿ ಮಾಡಿತ್ತು. ಆದೇಶ ವಾಪಸ್‍ಗೆ ನಟ ಶಿವಣ್ಣ, ಸುದೀಪ್, ಯಶ್, ದುನಿಯಾ ವಿಜಿ, ರಕ್ಷಿತ್ ಶೆಟ್ಟಿ ಸೇರಿ ಹಲವರು ಮನವಿ ಮಾಡಿದ್ರು.

Comments

Leave a Reply

Your email address will not be published. Required fields are marked *