ತೌಕ್ತೆ ಚಂಡವಾರುತಕ್ಕೆ ಮೀನುಗಾರ ಬಲಿ- ಹಲವು ಮನೆಗಳಿಗೆ ನುಗ್ಗಿದ ಸಮುದ್ರದ ನೀರು

ಕಾರವಾರ: ‘ತೌಕ್ತೆ’ ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಕೋಡಿಯಲ್ಲಿ ನೀರು ಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಅಲೆಗಳ ಅಬ್ಬರಕ್ಕೆ ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ.

ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತರಾಗಿದ್ದಾರೆ. ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆತಕ್ಕೆ ನೀರು ಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ನೀರಿಗೆ ಇಳಿದ್ದರು. ಆಗ ಅಪ್ಪಳಿಸಿದ ಅಲೆಗೆ ಮತ್ತೊಂದು ದೋಣಿಯು ಅವರನ್ನು ದಡದಿಂದ ಮೇಲೆ ತರಬೇಕಿದ್ದ ದೋಣಿಯ ನಡುವೆ ಸಿಲುಕಿಸಿತು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಜಿಲ್ಲೆಯ ಕರಾವಳಿ ಭಾಗದಲ್ಲಿ ಅಲೆಗಳು ಹೆಚ್ಚು ಏಳುತಿದ್ದು ಲಂಗುರು ಹಾಕಿದ ಬೋಟುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದು, ತೀರ ಪ್ರದೇಶದಲ್ಲಿ ಸಮುದ್ರದ ನೀರು ನುಗ್ಗುತ್ತಿದ್ದು ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಕರಾವಳಿ ಭಾಗದಲ್ಲಿ ಮಳೆಯ ಅಬ್ಬರಕ್ಕಿಂತ ಗಾಳಿ ಹಾಗೂ ಸಮುದ್ರದ ಅಲೆಯ ಅಬ್ಬರ ಕಡಲ ತೀರದ ನಿವಾಸಿಗಳನ್ನು ಸಂತ್ರಸ್ತರನ್ನಾಗಿಸಿದೆ.

ಕುಮಟಾದ ಹೊನ್ನಳ್ಳಿ, ನ್ಯೂ ಫಿಷ್ ಮಾರ್ಕೇಟ್, ಗುಂದ ಪ್ರದೇಶದಲ್ಲಿ ಸಮುದ್ರದ ನೀರು ಮನೆಗಳಿಗೆ ಹೊಕ್ಕಿದ್ದು ಐದಕ್ಕೂ ಹೆಚ್ಚು ಮನೆಗಳು ಸಮುದ್ರದ ನೀರಿನಿಂದ ಜಲಾವೃತವಾಗಿದೆ. ಕುಮಟಾದ ದಾರೇಶ್ವರ ಮಠದ ಬಳಿ ಸಮುದ್ರ ನೀರು ಉಕ್ಕಿ ಬೋಟುಗಳು ಹಾಗೂ ಬಲೆಗಳು ಕೊಚ್ವಿ ಹೋಗಿದೆ. ತೊಂದರೆಗೊಳಗಾದ ಪ್ರದೇಶಕ್ಕೆ ಕುಮಟಾದ ಎಸಿ ಎಂ.ಅಜೀತ್ , ತಹಶೀಲ್ದಾರ್ ಎಂ ಎನ್ ನಾಯ್ಕ, ಪುರಸಭಾ ಆಯುಕ್ತ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments

Leave a Reply

Your email address will not be published. Required fields are marked *