ತೇಜಸ್ವಿ ಸೂರ್ಯ ವಿಷ ಬೀಜ – ಡಿಕೆಶಿ ಕಿಡಿ

ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ವಿಷ ಬೀಜಕ್ಕೆ ಹೋಲಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

ಬೆಡ್‍ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವನ ಬಗ್ಗೆ ಏನು ಹೇಳೋದು? ಅಧಿಕಾರಿ ಕೊಟ್ಟಿದ್ದ ಹೆಸರನ್ನು ಓದಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರಿ ಒಂದೇ ಸಮುದಾಯದ ಹೆಸರು ಕೊಡುತ್ತಾರಾ? ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿ ಮೇಲೆ ಎತ್ತಿಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಬೆಡ್, ಆಕ್ಸಿಜನ್ ಏಲ್ಲಿ ಸಿಗುತ್ತೆ ಅಂತ ಒಂದು ಬೋರ್ಡ್ ಹಾಕಿ. ಬೆಡ್ ಆಕ್ಸಿಜನ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಾರ್ವಜನಿಕರಿಗೆ ಲಸಿಕೆ ಏಲ್ಲಿ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ದೂರಿದರು.

ತಮಿಳುನಾಡಿನಲ್ಲಿ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೆ 4 ಸಾವಿರ ಹಾಕುತ್ತೇವೆ ಎಂದು ಘೋಷಣೆ ಮಾಡುತ್ತಾರೆ. ಏನೋ ಒಂದು ಕೊಡಿ ಎಂದು ಜನ ಕೇಳುತ್ತಿದ್ದಾರೆ. ಕೊಡಲು ಆಗುವುದಿಲ್ಲ ಅಂದರೆ ಆಗುವುದಿಲ್ಲ ಎಂದು ಹೇಳಿಬಿಡಿ. ಸುಮ್ಮನೇ ಏನೇನೂ ಹೇಳಬೇಡಿ ಎಂದು ಟೀಕಿಸಿದರು.

ರೈತರ ತರಕಾರಿಯನ್ನು ಕೊಳ್ಳುವವರಿಲ್ಲ. ತೋಟಗಾರಿಕಾ ಸಚಿವರು, ಕೃಷಿ ಸಚಿವರು ರೈತರ ಹೊಲಗಳಿಗೆ ಭೇಟಿ ನೀಡಿದ್ದಾರಾ? ಎಪಿಎಂಸಿಗಳಿಗೆ ಭೇಟಿ ನೀಡಿ ರೈತರ ಕಷ್ಟ ಅರಿತುಕೊಳ್ಳಲಿ. ಕಾರ್ಮಿಕರು, ಬೀದಿ ವ್ಯಾಪಾರಿಗಳು, ಬಡವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಬಡವರ ಖಾತೆಗಳಿಗೆ 10 ಸಾವಿರ ಹಣ ಹಾಕಬೇಕು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕೊರೊನಾ ಮೂರನೇ ಅಲೆ ಎದುರಿಸಲು ತಯಾರಿ ಮಾಡಿಕೊಳ್ಳಿ ಅಂತ ಸಿಎಂ ಹೇಳಿದ್ದಾರೆ. ಮೊದಲು ಸಿಎಂ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಣ ಮಾಡಲಿ. ಬಳಿಕ ಮೂರನೇ ಕೊರೊನಾ ಅಲೆಗೆ ತಯಾರಿ ಮಾಡೋಣ. ಈಗ ಮೊದಲು ಸಾಯುತ್ತಿರುವ ಜನವನ್ನು ಬದುಕಿಸಿ ಎಂದು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *