ತೇಜಸ್ವಿ ಸೂರ್ಯರಿಂದ ಕನ್ನಡಿಗರಿಗೆ ಅಪಮಾನ: ಡಿಕೆಶಿ

– ತೇಜಸ್ವಿ ಅಲ್ಲ, ಅಮಾವಾಸ್ಯೆ ಸೂರ್ಯ
– ಸಂಸದ ಕ್ಷಮೆ ಕೇಳುವಂತೆ ಆಗ್ರಹ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ರೈತರ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದು, ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಡಿಕೆಶಿ, ಬೆಂಗಳೂರು ಟೆರರಿಸ್ಟ್ ಹಬ್ ಎಂಬ ತೇಜಸ್ವಿ ಸೂರ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಓದಿ: ಬೆಂಗಳೂರು ಗಲಭೆ ಬಗ್ಗೆ ಅಮಿತ್ ಶಾ ಜೊತೆ ಚರ್ಚಿಸಿದ್ದೇನೆ: ತೇಜಸ್ವಿಸೂರ್ಯ

ತೇಜಸ್ವಿ ಅಲ್ಲ ಅಮಾವಾಸ್ಯೆ ಸೂರ್ಯ. ರಾಜ್ಯದ ಜನರ ಕ್ಷಮೆ ಕೇಳಬೇಕು. ಯಡಿಯೂರಪ್ಪ ನಿಮ್ಮ ಸಂಸದ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಮೊದಲು ಬೆಂಗಳೂರಿಗೆ ಬಂದು ಆ ಮೇಲೆ ದೆಹಲಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ವಾಜಪೇಯಿ ಹೇಳಿದ್ದರು. ಮೊದಲು ಸಂಸದ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಬೆಂಗಳೂರು ಟೆರರಿಸ್ಟ್ ಗಳ ತಾಣ ಆಗ್ತಿದೆ ಎಂದು ಹೇಳಲು ಬೆಂಗಳೂರನ್ನ ತೇಜಸ್ವಿ ಸೂರ್ಯ ಕಟ್ಟಿದ್ರಾ ಎಂದು ಪ್ರಶ್ನಿಸಿದರು. ಬೆಂಗಳೂರನ್ನು ಇಡೀ ಜಗತ್ತು ನೋಡುತ್ತಿದೆ. ಪ್ರಪಂಚದ ಹಲವು ದೇಶಗಳಿಗೆ ಬೆಂಗಳೂರು ಎಂಜಿನಿಯರ್ ಗಳನ್ನ ಕೊಟ್ಟಿದೆ. ಐಟಿ ಹಬ್ ಆಗಿ ಬೆಂಗಳೂರು ಹೊರಹೊಮ್ಮಿದೆ. ತೇಜಸ್ವಿ ಸೂರ್ಯ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ. ಕರ್ನಾಟಕ ಟೆರರಿಸ್ಟ್ ಗಳ ತಾಣ ಅಂತ ಒಪ್ಪಲು ಸಾಧ್ಯವಿಲ್ಲ. ತಕ್ಷಣ ತೇಜಸ್ವಿ ಸೂರ್ಯ ಕನ್ನಡಿಗರ ಕ್ಷಮೆ ಕೇಳಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *