ತಾಂಡಾಗಳಲ್ಲಿರುವ ಸೋಂಕಿತರಿಂದ ಉದ್ಧಟತನ-ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಸೇರಲು ನಕಾರ

– ಸೋಂಕಿತರ ಮನವೊಲಿಸಲು ಪೊಲೀಸರು, ಜಿಲ್ಲಾಡಳಿತದ ಹರಸಾಹಸ

ಯಾದಗಿರಿ: ಕ್ವಾರಂಟೈನ್ ಅವಧಿ ಮುಗಿಸಿ ಕೊರೊನಾ ವರದಿ ಬರುವ ಮುನ್ನವೇ ತಮ್ಮ ಗ್ರಾಮಗಳಿಗೆ ತೆರಳಿರುವ ಮಹಾರಾಷ್ಟ್ರದ ಕಾರ್ಮಿಕರಿಂದ ಮತ್ತೊಂದು ತಲೆ ನೋವನ್ನು ಯಾದಗಿರಿ ಜಿಲ್ಲಾಡಳಿತ ಎದುರಿಸುತ್ತಿದೆ.

ಕ್ವಾರಂಟೈನ್ ಅವಧಿ ಮುಗಿಸಿ ಮನೆಗಳಿಗೆ ತೆರಳಿರುವ ಕಾರ್ಮಿಕರ ವರದಿಗಳು ಈಗ ಪಾಸಿಟಿವ್ ಬರುತ್ತಿದ್ದು, ಸೋಂಕಿತರನ್ನು ವಾಪಸು ಕೋವಿಡ್ ಆಸ್ಪತ್ರೆಗೆ ಕರೆತರಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಮನೆಗೆ ಹೋಗಿರುವ ಸೋಂಕಿತರು ಪುನಃ ಆಸ್ಪತ್ರೆಗೆ ಬರಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗ್ರಾಮಗಳಿಗೆ ಬರುತ್ತಿರುವ ಪೊಲೀಸರು, ಮತ್ತು ಅಧಿಕಾರಗಳ ಜೊತೆ ಕೆಲ ತಾಂಡಾಗಳ ಜನರು ವಾಗ್ವಾದ ನಡೆಸುತ್ತಿದ್ದಾರೆ.

ಯಾದಗಿರಿ ತಾಲೂಕಿನ ಥಾವರುನಾಯಕ್ ತಾಂಡಾ, ಶಹಪುರದ ಬೇವನಹಳ್ಳಿ ತಾಂಡಾ, ಗುರುಮಿಠಕಲ್ ನ ಚಿಂತನಳ್ಳಿ ತಾಂಡಾಗಳಲ್ಲಿ ಸೋಂಕಿತರು ಉದ್ಧಟತನ ತೋರುತ್ತಿದ್ದಾರೆ. ಸೋಂಕು ದೃಢ ಹಿನ್ನೆಲೆ ಜನರನ್ನು ಕರೆ ತರಲು ತಾಂಡಾಗೆ ತೆರಳಿದ್ದ ಪೊಲೀಸರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಕ್ವಾರಂಟೈನ್ ಮುಗಿಸಿ ಬಂದವರನ್ನ ಮತ್ತೆ ಏಕೆ ಕರೆದುಕೊಂಡು ಹೋಗುತ್ತೀರಿ, ನಾವು ಬರೋದಿಲ್ಲ ಎಂದು ಅಸಡ್ಡೆಯ ಮಾತುಗಳನ್ನಾಡುತ್ತಿದ್ದಾರೆ. ಸಾಂಸ್ಥಿಕ ಕ್ವಾರೆಂಟನ್ ನಲ್ಲಿದ್ದ ವಿವಿಧ ತಾಂಡಾಗಳ ಜನರ ಕ್ವಾರಂಟೈನ್ ಅವಧಿ ಜೂನ್ 7ರಂದು ಮುಗಿದಿತ್ತು. ಆದ್ರೆ ಇವರ ವರದಿ ಬಂದಿರಲಿಲ್ಲ. ಕ್ವಾರಂಟೈನ್ ಗಳಲ್ಲಿ ಕೆಲವರು ಗಲಾಟೆ ನಡೆಸಿದ್ದರು. ಹೀಗಾಗಿ ಜಿಲ್ಲಾಡಳಿತ ಇವರಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿ ಬಿಡುಗಡೆಗೊಳಿಸಿತ್ತು.

Comments

Leave a Reply

Your email address will not be published. Required fields are marked *