ತಲಾ 4 ಸಾವಿರ ಕೊಟ್ಟು ಲಾರಿಯಲ್ಲಿ ಊರಿಗೆ ಹೋಗ್ತಿರೋ ಕಾರ್ಮಿಕರು

– 130 ಮಂದಿಯನ್ನು ತಡೆಹಿಡಿದ ಪೊಲೀಸರು

ಹುಬ್ಬಳ್ಳಿ: ಬೆಂಗಳೂರಿನಿಂದ ಅನಧಿಕೃತವಾಗಿ ಖಾಸಗಿ ಕಂಟೇನರ್ ಲಾರಿ ಮೂಲಕ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ಸುಮಾರು 130 ಪ್ರವಾಸಿ ಕಾರ್ಮಿಕರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆ ಬೆಂಡಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ.

ಬೆಂಡಿಗೇರಿ ಇನ್‍ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ಗಬ್ಬೂರ್ ಬೈ ಪಾಸ್ ಎರಡು ಕಂಟೇನರ್ ಲಾರಿ ಮೂಲಕ ಆಗಮಿಸಿದ ವಲಸೆ ಕಾರ್ಮಿಕರನ್ನು ತಡೆದು ದಾಖಲೆ ಪರಿಶೀಲನೆ ನಡೆಸಲಾಗಿದೆ. ಎರಡು ಲಾರಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 130 ವಲಸೆ ಕಾರ್ಮಿಕರು ಹುಬ್ಬಳ್ಳಿಗೆ ಆಗಮಿಸಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುವವರೆಗೆ ಕೂಡ ಯಾವುದೇ ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ನಡೆಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

ಯಾವುದೇ ಪಾಸ್ ಹಾಗೂ ಅನುಮತಿಯಿಲ್ಲದೇ ವಲಸೆ ಕಾರ್ಮಿಕರು ಖಾಸಗಿ ಕಂಟೇನರ್ ಲಾರಿಯನ್ನು ತಲಾ 4,000 ರೂಪಾಯಿ ನೀಡಿ ಬಾಡಿಗೆ ಮಾಡಿಕೊಂಡು ಉತ್ತರ ಪ್ರದೇಶಕ್ಕೆ ಹೊರಟಿದ್ದಾರೆ. ಈ ಮಾಹಿತಿ ಕಲೆಹಾಕಿದ ಪೊಲೀಸರು ಗಬ್ಬೂರ ಬಳಿ ತಡೆದು ತಪಾಸಣೆ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಡಳಿತ ಶ್ರಮಿಕ್ ಎಕ್ಸ್ ಪ್ರೆಸ್ ಮೂಲಕ ಉತ್ತರ ಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಕಳಿಸಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.

Comments

Leave a Reply

Your email address will not be published. Required fields are marked *