ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡ್ಕೊಳ್ತಿದ್ದಾರೆ – ಸಿದ್ದು ವಿರುದ್ಧ ಶೆಟ್ಟರ್ ಕಿಡಿ

ಧಾರವಾಡ: ಜಮೀರ್ ಅಹ್ಮದ್ ಕ್ಯಾಸಿನೋ ಹೋಗಿದ್ದು ತಪ್ಪಲ್ಲ ಅಂತ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಕ್ಯಾಸಿನೋಗೂ ಹೋಗಬಾರದು, ಜೂಜು ಆಡಬಾರದು ಅಂತೆಲ್ಲ ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ ಜಮೀರ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಅಂತ ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಇದೆಲ್ಲ ಹೊರ ಬರಲಿಲ್ಲ. ಇವರು ಅಧಿಕಾರದಲ್ಲಿದ್ದಾಗ ಅದಕ್ಕೆಲ್ಲ ರಕ್ಷಣೆ ಕೊಟ್ಟಿದ್ದರು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಎಲ್ಲವೂ ಹೊರಬರುತ್ತಿದೆ. ಬಹಳ ಜನ ಇದರಲ್ಲಿ ಹೊರ ಬರುತ್ತಾರೆ. ನಿಮಗೆ ಹೆಸರು ಗೊತ್ತಿದ್ದರೆ ಹೇಳಿ ಬಿಡಿ ಅಂತ ಪತ್ರಕರ್ತರನ್ನೇ ಕೇಳಿದ ಶೆಟ್ಟರ್, ನೀವೇ ಹೆಸರು ಕೊಡಿ, ನಾನೇ ತನಿಖೆ ಮಾಡಿ ಅಂತ ಹೇಳುತ್ತೆನೆ ಎಂದರು.

ಇದೇ ವೇಳೆ ಸರ್ಕಾರ ಸಿಬಿಐ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ತಪ್ಪು ಮಾಡಿಲ್ಲವೋ ಅವರು ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ. ಜಮೀರ್ ತಪ್ಪು ಮಾಡಿಲ್ಲ ಅಂತಂದ್ರೆ ಯಾಕೆ ಹೆದರಬೇಕು. ಯೋಗೀಶ್ ಗೌಡ ಹತ್ಯೆ ಪ್ರಕರಣವೂ ಇರಲಿ, ತಪ್ಪು ಮಾಡದವರು ಹೆದರಬೇಕಾಗಿಲ್ಲ ಎಂದರು.

ವಿಜಯೇಂದ್ರ ವಿರುದ್ಧ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ಪತ್ರ ಸಿಕ್ಕಿದ್ರೆ ಕೊಡಿ ಎಂದು ಮಾಧ್ಯಮಕ್ಕೆ ಕೇಳಿದರು. ಕೈಗಾರಿಕೆ ಇಲಾಖೆ ಸಚಿವನಾಗಿ ನನ್ನ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಿಗಾಗಿ ನಾನು ದೆಹಲಿಗೆ ಹೋಗಿದ್ದು ಹೊರತು, ದೆಹಲಿ ಪ್ರವಾಸಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈ ಹಿಂದೆ ದೆಹಲಿಗೆ ಹೋಗಿ ಸಚಿವ ಪಿಯೂಷ್ ಗೊಯಲ್ ಸೇರಿದಂತೆ ಹಲವರಿಗೆ ಭೇಟಿಯಾಗುವದು ಉಳಿದಿತ್ತು. ಈಗ ಹೋಗಿ ಭೇಟಿಯಾಗಿದ್ದೆನೆ ಎಂದ ಸಚಿವ ಶಟ್ಟರ್ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದ ಗೌಡರನ್ನು ಭೇಟಿಯಾಗಿ ಬಂದಿದ್ದೆನೆ ಎಂದರು.

Comments

Leave a Reply

Your email address will not be published. Required fields are marked *