ತಮಿಳು ನಾಮಫಲಕ ಕಿತ್ತು ಹಾಕಿದ್ದಕ್ಕೆ ವಿದೇಶದಿಂದ ಬೆದರಿಕೆ ಕರೆ : ವಾಟಾಳ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ತಮಿಳು ನಾಮಫಲಕ ಕಿತ್ತು ಹಾಕಿದ್ದಕ್ಕೆ ತಮಿಳರಿಂದ ನನಗೆ ನೂರಾರು ಬೆದರಿಕೆ ಕರೆಗಳು ಬರುತ್ತಿವೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಕಳೆದ ವಾರ ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ಚಾಮರಾಜನಗರದ ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಅವರು ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ಸ್ಥಳದಲ್ಲಿ ಹಾಕಿದ್ದ ತಮಿಳ ನಾಮಫಲಕಗಳನ್ನು ಕಿತ್ತು ಹಾಕಿದ್ದರು.

ಈ ಪ್ರತಿಭಟನೆಯ ಬಳಿಕ ತನಗೆ ಕೆನಡಾ, ಅಮೆರಿಕ, ಮಲೇಶಿಯ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನಾನು ಯಾವ ಬೆದರಿಕೆಗೂ ಮಣಿಯುವುದಿಲ್ಲ, ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ನನ್ನ ಹೋರಾಟ ಮುಂದುವರಿಸುತ್ತೇನೆ. ಜೊತೆಗೆ ಅವರೆಲ್ಲರ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟದ ಮುಂದುವರಿದ ಭಾಗವಾಗಿ ಫೆಬ್ರುವರಿ 13 ರಂದು ಚಾಮರಾಜನಗರ ಜಿಲ್ಲೆಯ ಪುಣಜನೂರು ಬಳಿ ಕರ್ನಾಟಕ ತಮಿಳುನಾಡು ಗಡಿ ಬಂದ್ ಮಾಡಲಾಗುವುದು ಎಂದು ಹೇಳಿದರು.

Comments

Leave a Reply

Your email address will not be published. Required fields are marked *