ತಂದೆ ವ್ಯಾಸಂಗ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಮಗ

– ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಜ್ಞಾನದೀವಿಗೆ’ ಟ್ಯಾಬ್ ವಿತರಣೆ
– ಮಕ್ಕಳಿಗೆ ಟ್ಯಾಬ್ ಕೊಟ್ಟ ರವಿಕುಮಾರ್

ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉಚಿತ ಟ್ಯಾಬ್ ವಿತರಣೆ ಮಾಡುವ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಮಹಾಯಜ್ಞ ‘ಜ್ಞಾನ ದೀವಿಗೆ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಇಂದು ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ಅವರು ತಮ್ಮ ತಂದೆ ಓದಿದ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು. ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ಟ್ಯಾಬ್ ಗಳನ್ನ ಸಹಾಯ ಮಾಡಿದರು. ತಮ್ಮ ತಂದೆ ರಾಮಮೂರ್ತಿಯವರು ವ್ಯಾಸಂಗ ಮಾಡಿದ ಹಣಬೆ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ರವಿಕುಮಾರ್ ಇಂದು ಟ್ಯಾಬ್ ವಿತರಿಸಿದರು.

ತಮ್ಮ ತಂದೆ, ತಾಯಿ ಕುಟುಂಬಸ್ಥರೊಂದಿಗೆ ಶಾಲೆಗೆ ಭೇಟಿ ನೀಡಿ 24 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 12 ಟ್ಯಾಬ್ ವಿತರಿಸಿದರು. ರವಿಕುಮಾರ್ ತಂದೆ ರಾಮಮೂರ್ತಿಯವರು ಮೂಲತಃ ಶಾಲೆ ಪಕ್ಕದ ಗ್ರಾಮ ಬೊಮ್ಮೇನಹಳ್ಳಿಯವರಾಗಿದ್ದು, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಇವರ ತಾಯಿ ಕಮಲಾವತಿ ಸಹ ಶಿಕ್ಷಕಿಯಾಗಿದ್ದವರು. ಹೀಗಾಗಿ ತಂದೆ ತಾಯಿಯ ಆಶಯದಂತೆ ಶಾಲೆಗೆ ಆಗಮಿಸಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಜೊತೆ ಸಹಯೋಗ ನೀಡಿರುವ ರೋಟರಿ ಸಂಸ್ಥೆಯ ಅವಿನಾಶ್, ಶಾಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗವಹಿಸಿದ್ದರು. ಸ್ಥಳದಲ್ಲಿಯೇ ಟ್ಯಾಬ್ ನ ಉಪಯೋಗ ಹಾಗೂ ಬಳಕೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಕ್ಕಳಿಗೆ ವಿವರಿಸಿದರು. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಬ್ಲಿಕ್ ಟಿವಿ, ರೋಟರಿ ಸಂಸ್ಥೆ ಹಾಗೂ ಟ್ಯಾಬ್ ಗಳಿಗೆ ದೇಣಿಗೆ ನೀಡಿದ ರವಿಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.

Comments

Leave a Reply

Your email address will not be published. Required fields are marked *