ಡ್ರೋನ್ ಪ್ರತಾಪ್‍ ಪೊಲೀಸರ ವಶಕ್ಕೆ

– ಬೆಂಗಳೂರಿನ ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೆ ಸೂಚನೆ
– ಕ್ವಾರಂಟೈನ್ ಅವಧಿ ನಂತರ ಕಾನೂನು ಕ್ರಮ

ಬೆಂಗಳೂರು: ಎಫ್‍ಐಆರ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್‍ನನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ತಲಘಟ್ಟಪುರ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಅಧಿಕಾರಿಗಳು ಅವನ ಹುಡುಕಾಟದಲ್ಲಿ ತೊಡಗಿದ್ದರು. ಇದೀಗ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರತಾಪ್‍ನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಗೇರಿ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ವಶಕ್ಕೂ ಮುನ್ನ ಮೈಸೂರಿನಲ್ಲಿ ಕ್ವಾರಂಟೈನ್ ಆಗುತ್ತೇನೆ ಎಂದು ಪ್ರತಾಪ್ ಪಟ್ಟು ಹಿಡಿದಿದ್ದ. ಆದರೆ ಬೆಂಗಳೂರಿನಲ್ಲೇ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಿ ಅಧಿಕಾರಿಗಳು ಕರೆತಂದಿದ್ದಾರೆ.

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪ್ರತಾಪ್ ನಾಪತ್ತೆಯಾಗಿದ್ದ. ಕೆಲ ದಿನಗಳ ಹಿಂದಷ್ಟೇ ಹೊರ ಜಿಲ್ಲೆಗೆ ಹೋಗಿದ್ದ ಪ್ರತಾಪ್, ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ. ಅಲ್ಲದೆ ಆತ ವಾಸವಿದ್ದ ಅಂಜನಾಪುರದ ಎಸ್‍ಎಸ್‍ಎಂಐಎಂಜಿ ವಿಂಡ್ ಪಾಲ್ ಅಪಾರ್ಟ್‍ಮೆಂಟ್‍ನಲ್ಲಿ ಕ್ವಾರಂಟೈನ್ ಆಗುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಇದಾವುದನ್ನು ಲೆಕ್ಕಿಸದ ಪ್ರತಾಪ್, ಜುಲೈ 16ರಂದು ಹೊರಗೆ ಬಂದಿದ್ದ. ಹೀಗಾಗಿ ಪಶುವೈದ್ಯ ಹಾಗೂ ವಿಧಿ ವಿಜ್ಞಾನ ತಜ್ಞ ಡಾ.ಎಚ್.ಎಸ್.ಪ್ರಯಾಗ್ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೋವಿಡ್-19 ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಂತರ ಪ್ರತಾಪ್ ಮೈಸೂರಿನಲ್ಲಿರುವುದನ್ನು ತಿಳಿದು ವಿಶೇಷ ತಂಡ ಮೈಸೂರಿಗೆ ತೆರಳಿತ್ತು. ಇದೀಗ ಪ್ರತಾಪ್‍ನನ್ನು ಬೆಂಗಳೂರಿಗೆ ಕರೆ ತಂದಿದ್ದು, ಸಾಂಸ್ಥಿಕ ಕ್ವಾರಂಟೈಗೆ ಒಳಪಡಿಸಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ನಂತರ ಕಾನೂನು ಕ್ರಮ ಕೈಗೊಳ್ಳುವ ಕುರಿತು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *