ಡೆಡ್ಲಿ ಕೊರೊನಾಗೆ ಗದಗದಲ್ಲಿ ಮತ್ತೊಂದು ಬಲಿ- ಬಾಗಲಕೋಟೆಯಲ್ಲೂ ಓರ್ವ ಸಾವು

ಗದಗ/ ಬಾಗಲಕೋಟೆ: ಹೆಮ್ಮಾರಿ ಕೊರೊನಾ ವೈರಸ್‍ಗೆ ಗದಗ ಹಾಗೂ ಬಾಗಲಕೋಟೆಯಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ.

ಗದಗ ಜಿಲ್ಲೆನಲ್ಲಿ ಕೊರೊನಾ ವೈರಸ್‍ನಿಂದ ಈವರೆಗೂ 3 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜನರಿಗೆ ಆತಂಕ ಮನೆ ಮಾಡಿದೆ. ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪದ 95 ವರ್ಷದ ವೃದ್ಧೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವೃದ್ಧೆಯ ಕೊರೊನಾ ರಿಪೋರ್ಟ್ ಬರುವುದಕ್ಕೂ ಮುನ್ನವೇ ವೈದ್ಯಕೀಯ ಸಿಬ್ಬಂದಿ ಸಿಟಿ ಸ್ಕ್ಯಾನ್, ಬ್ಲಡ್ ಟೆಸ್ಟ್ ಹೀಗೆ ಅನೇಕ ಕಡೆಗಳಲೆಲ್ಲಾ ಕರೆದೊಯ್ದಿದ್ದಾರೆ. ನಂತರ ಪಾಸಿಟಿವ್ ಅಂತ ವರದಿ ಬಂದಿದೆ. ಈಗ ವೃದ್ಧೆ ಸಾವನ್ನಪ್ಪಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ.

ಸೋಂಕಿನಿಂದ ಸಾವನ್ನಪ್ಪಿದ ಅಜ್ಜಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವಾಗಿದೆ. ವೃದ್ಧೆಯ ಕುಟುಂಬದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಗದಗ ಜಿಲ್ಲೆ ನಿಡಗುಂದಿಕೊಪ್ಪ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ.

ಬಾಗಲಕೋಟೆ:
ಬಾಗಲಕೋಟೆಯ ನವನಗರದ 47ನೇ ಸೆಕ್ಟರ್ ನಿವಾಸಿ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಭಾರೀ ಭಯಾನಾಕವಾಗಿದೆ.

ಮೃತ ವ್ಯಕ್ತಿಯು ಗೂಡ್ಸ್ ವಾಹನದ ಚಾಲಕನಾಗಿದ್ದ. ಹೀಗಾಗಿ ಗೂಡ್ಸ್ ವಾಹನ ತೆಗೆದುಕೊಂಡು ಬೇರೆ ಬೇರೆ ಪ್ರದೇಶಕ್ಕೆ ಸುತ್ತಾಡಿದ್ದ. ತೀವ್ರ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಗಂಟಲು ದ್ರವವನ್ನು ಕೊರೊನಾ ಪರೀಕ್ಷೆ ಮಾಡಲಾಗಿತ್ತು. ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದಿತ್ತು. ಆದರೆ ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟಿದ್ದಾರೆ. ಕೋವಿಡ್-19 ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

Comments

Leave a Reply

Your email address will not be published. Required fields are marked *