ಡೀಸೆಲ್ ಬದಲು ನೀರು – ಮಾರ್ಗ ಮಧ್ಯೆ ಕೆಟ್ಟು ನಿಂತ 3 ಲಾರಿ, 3 ಟ್ರ್ಯಾಕ್ಟರ್, 2 ಕಾರು

ರಾಯಚೂರು: ಪೆಟ್ರೋಲ್ ಬಂಕ್ ಸಿಬ್ಬಂದಿ ಡೀಸೆಲ್ ಬದಲಿಗೆ ವಾಹನಗಳ ಟ್ಯಾಂಕ್‍ಗೆ ನೀರು ತುಂಬಿದ ಪರಿಣಾಮ ಅವು ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆ ರಾಯಚೂರಿನ ಮಸ್ಕಿಯ ಕನಕವೃತ್ತದಲ್ಲಿನ ಸೂಪರ್ ಪಿಲ್ಲಿಂಗ್ ಸ್ಟೇಷನ್‍ನಲ್ಲಿ ನಡೆದಿದೆ.

ಫಿಲ್ಲಿಂಗ್ ಸ್ಟೇಷನ್ ಸಿಬ್ಬಂದಿ ಹಾಗೂ ಮಾಲೀಕರ ಬೇಜವಾಬ್ದಾರಿತನಕ್ಕೆ ವಾಹನ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. 10 ಸಾವಿರ ರೂಪಾಯಿ ಡಿಸೇಲ್ ಹಾಕಿಸಿದರೂ ಲಾರಿ ಸ್ಟಾರ್ಟ್ ಆಗಿರಲಿಲ್ಲ. ಹೀಗಾಗಿ ಅನುಮಾನದ ಮೇಲೆ ಪರೀಕ್ಷೆ ಮಾಡಿದರೆ ಟೀಸೆಲ್ ಟ್ಯಾಂಕ್ ತುಂಬಾ ನೀರು ತುಂಬಿರುವುದು ಬೆಳಕಿಗೆ ಬಂದಿದೆ.

ಇದೇ ರೀತಿ ಇತರ ವಾಹನಗಳಿಗೂ ನೀರು ತುಂಬಿದ್ದು, ಪರಿಣಾಮ ಮಾರ್ಗ ಮಧ್ಯೆಯೇ ಮೂರು ಲಾರಿ, ಮೂರು ಟ್ರ್ಯಾಕ್ಟರ್ ಹಾಗೂ ಎರಡು ಕಾರುಗಳು ಕೆಟ್ಟು ನಿಂತಿವೆ. ಕೂಡಲೇ ಬಂಕ್ ಗೆ ಬಂದ ವಾಹನ ಮಾಲೀಕರು ಸಿಬ್ಬಂದಿ ಹಾಗೂ ಮಾಲೀಕರ ವಿರುದ್ಧ ಮಾತಿನ ಚಕಮಕಿ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮಾತಿಗೆ ಮಾತು ಬೆಳೆದ ಬಳಿಕ ಬಂಕ್ ಮಾಲೀಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ವಾಹನಗಳನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿದ್ದಾನೆ.

Comments

Leave a Reply

Your email address will not be published. Required fields are marked *