ಡಿವೈಡರ್ ದಾಟಿ ಮನೆಗೆ ನುಗ್ಗಿದ ಕಂಟೈನರ್ ಲಾರಿ – ತೆಂಗಿನ ಮರದಿಂದ ತಪ್ಪಿತು ಭಾರೀ ಅನಾಹುತ

ನೆಲಮಂಗಲ: ಮಂಗಳೂರು ಕಡೆಗೆ ಸಂಚರಿಸುತಿದ್ದ ಕಂಟೈನರ್‌ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಷ್ಟ್ರೀಯ ಹೆದ್ದಾರಿಯಿಂದ ಡಿವೈಡರ್ ದಾಟಿ ಮನೆಗೆ ನುಗ್ಗಿದ ಪರಿಣಾಮ ತೆಂಗಿನ ಮರದಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕದ ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದ್ದು, ಹಳೆಯ ತೆಂಗಿನ ಮರ ನೆಲಕ್ಕೆ ಬಿದ್ದಿದೆ.

ವೇಗವಾಗಿ ಬರುತ್ತಿದ್ದ ಲಾರಿ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ವೇಗ ನಿಯಂತ್ರಣಕ್ಕೆ ಬಂದಿದೆ. ಇದರಿಂದಾಗಿ ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ನೆರವಿನೊಂದಿಗೆ ಲಾರಿ ತೆರವುಗೊಳಿಸಿದ್ದಾರೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *