ಡಿಕೆಶಿ ತಪ್ಪು ಮಾಡದಿದ್ದರೆ ಹೆದರಿಕೆ ಯಾಕೆ: ವೇದವ್ಯಾಸ್ ಕಾಮತ್ ಪ್ರಶ್ನೆ

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಯ ಮೇಲೆ ಸಿಬಿಐ ದಾಳಿಯ ಕುರಿತು ಕಾಂಗ್ರೆಸ್ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡರು ತಮ್ಮ ನಾಯಕ ತಪ್ಪು ಮಾಡದೇ ಹೋಗಿದ್ದರೆ ಸಿಬಿಐ ಯಾಕೆ ದಾಳಿ ಮಾಡುತ್ತಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಲಿ. ಯಾರೇ ತಪ್ಪು ಮಾಡಿದರೂ ತನಿಖಾ ತಂಡಗಳಿಗೆ ಆ ವ್ಯಕ್ತಿಯನ್ನು ಬಂಧಿಸಲು ಅಥವಾ ವಿಚಾರಣೆ ನಡೆಸಲು ಅಧಿಕಾರವಿದೆ ಎಂದು ಹೇಳಿದ್ದಾರೆ.

ಯಾವುದೇ ಪಕ್ಷವು ಆಡಳಿತದಲ್ಲಿದ್ದರೂ ತನಿಖಾ ತಂಡ ತಪ್ಪಿತಸ್ಥರನ್ನು ವಿಚಾರಣೆ ನಡೆಸುತ್ತದೆ. ಕಾಂಗ್ರೆಸ್ ಅಥವಾ ಇನ್ಯಾವುದೇ ಪಕ್ಷದ ಮುಖಂಡರ ಮೇಲೆ ಸಿಬಿಐ ದಾಳಿ ಮಾಡಿಲ್ಲ. ಕೇವಲ ಡಿಕೆಶಿ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದರೆ ಸೂಕ್ತ ಮಾಹಿತಿಯ ಆಧಾರದ ಮೇಲೆಯೇ ವಿಚಾರಣೆ ನಡೆಯುತ್ತದೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಮುಖರು ರಾಜಕೀಯ ಲಾಭಕ್ಕಾಗಿ ಬಿಜೆಪಿಯನ್ನು ಮಧ್ಯೆ ಎಳೆದು ತರುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡರು ತಪ್ಪು ಮಾಡದಿದ್ದರೆ ತನಿಖೆಗೆ ಹೆದರುವ ಅವಶ್ಯಕತೆ ಏನಿದೆ? ಜನರ ಮನಸ್ಸಿನಲ್ಲಿ ಗೊಂದಲ ಎಬ್ಬಿಸುವ ಕಾಂಗ್ರೆಸ್ ಷಡ್ಯಂತ್ರವನ್ನು ಬುದ್ಧಿವಂತ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *