ಡಾ.ರಾಜ್ ಮನೆಯ ಮತ್ತೊಂದು ಕುಡಿಯನ್ನು ಪರಿಚಯಿಸುತ್ತಿದ್ದೇನೆ: ದುನಿಯಾ ವಿಜಯ್

ಚಾಮರಾಜನಗರ: ನಟ ಡಾ.ರಾಜ್‍ಕುಮಾರ್ ಮನೆಯಲ್ಲಿ ಬೆಳೆದ ಹುಡುಗನನ್ನು ಸ್ಯಾಂಡಲ್‍ವುಡ್ ಗೆ ಪರಿಚಯಿಸುತ್ತಿದ್ದೇನೆ ಎಂದು ನಟ ದುನಿಯಾ ವಿಜಯ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆಗೆ ದುನಿಯಾ ವಿಜಯ್ ಭೇಟಿ ನೀಡಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಡಾ.ರಾಜ್‍ಕುಮಾರ್, ಶಿವಣ್ಣ, ಪುನೀತ್ ಅವರ ಮನೆಯಲ್ಲಿ ಬೆಳೆದ ಮುದ್ದಾದ ಹುಡುಗನನ್ನು ಲಾಂಚ್ ಮಾಡುತ್ತಿದ್ದೇವೆ. ಈ ಚಿತ್ರವನ್ನು ನಾನೇ ನಿರ್ದೇಶಿಸುತ್ತಿದ್ದು, ಜನವರಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಿವೀಲ್ ಮಾಡುತ್ತೇವೆ ಎಂದು ತಿಳಿಸಿದರು.

ನಾನೇ ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಮೂಲಕ ಚಾಮರಾಜನಗರ ಜಿಲ್ಲೆಯ ಯುವಕನನ್ನು ನಾಯಕ ನಟನನ್ನಾಗಿ ಬೆಳ್ಳಿ ಪರದೆಗೆ ತರುತ್ತಿದ್ದೇವೆ. ಈ ಬಗ್ಗೆ ನಮಗೂ ತುಂಬಾ ಖುಷಿಯಿದೆ. ರಾಜ್ ಮನೆತನದ ಲಕ್ಕಿ ಗೋಪಾಲ್ ಎಂಬ ಯುವ ನಟನನ್ನು ಹಿರೋ ಆಗಿ ಪರಿಚಯಿಸುತ್ತಿದ್ದೇವೆ. ನಟ ಹೇಗಿದ್ದಾರೆ, ತಯಾರಿ ಹೇಗಿದೆ ಎಂಬುದರ ಬಗ್ಗೆ ಶೀಘ್ರ ರಿವೀಲ್ ಮಾಡುತ್ತೇವೆ. ಅಣ್ಣಾವ್ರ ಮನೆಯ ಮತ್ತೊಂದು ಕುಡಿ ಅದು. ನಾನು ಈ ಸಿನಿಮಾ ನಿರ್ದೇಶನವನ್ನಷ್ಟೇ ಮಾಡುತ್ತಿದ್ದೇನೆ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕೊರೊನಾ ತೊಲಗುತ್ತಿದ್ದಂತೆ ಆದಷ್ಟು ಬೇಗ ಸಲಗ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಗುಂಡ್ಲುಪೇಟೆಗೆ ದುನಿಯಾ ವಿಜಯ್ ಆಗಮಿಸುವುದನ್ನು ಅರಿತಿದ್ದ ಅಭಿಮಾನಿಗಳು, ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬ್ಲಾಕ್ ಕೋಬ್ರಾ ನೋಡಲು ಮುಗಿಬಿದ್ದರು. ಇದೇ ವೇಳೆ ಅಭಿಮಾನಿಗಳಿಗಾಗಿ ದುನಿಯಾ ವಿಜಯ್ ಸಲಗ ಚಿತ್ರದ ಡೈಲಾಗ್ ಹೊಡೆದು ರಂಜಿಸಿದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದುನಿಯಾ ವಿಜಯ್ ಪತ್ನಿ ಮತ್ತು ಮಗನ ಜೊತೆ ಆಗಮಿಸಿದ್ದರು. ವಿಜಯ್ ಜೊತೆ ಸೆಲ್ಫಿಗೆ ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.

Comments

Leave a Reply

Your email address will not be published. Required fields are marked *