ಡಾನ್ ಆದ್ರೂ ಸಿನಿಮಾರಂಗದವ್ರ ಜೊತೆ ನಿಕಟ ಸಂಬಂಧ ಹೊಂದಿದ್ದ ಮುತ್ತಪ್ಪ ರೈ

– ರೈ ಕ್ಲಾಪ್ ಮಾಡಿದ ಮೊದಲ ಸಿನಿಮಾ ಯಾವ್ದು ಗೊತ್ತಾ?

ಬೆಂಗಳೂರು: ಮೃತರಾದ ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಅವರು ಡಾನ್ ಅದರೂ ಸಿನಿಮಾರಂಗದ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದರು.

ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಇಂದು ನಸುಕಿನ ಜಾವ 2.10ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಂದು ಕಾಲದಲ್ಲಿ ಡಾನ್ ಆಗಿ ಮೆರೆದಿದ್ದ ರೈ ನಂತರ ಜಯಕರ್ನಾಟಕ ಸಂಘಟನೆ ಕಟ್ಟಿ ಸಮಾಜ ಸೇವೆಯ ಕಡೆ ಮುಖ ಮಾಡಿದ್ದರು. ಜೊತೆಗೆ ಸಿನಿಮಾದಲ್ಲೂ ಅಭಿನಯಿಸಿದ್ದರು.

ಹೌದು. ಒಂದು ಕಾಲದಲ್ಲಿ ಭೂಗತ ಲೋಕದ ದೊರೆಯಾಗಿ ಇಡೀ ಬೆಂಗಳೂರನ್ನೇ ಆಳಿದ್ದ ರೈ, ಕನ್ನಡ ಮತ್ತು ತುಳು ಭಾಷೆಯಲ್ಲಿ ತಲಾ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. 2012ರಲ್ಲಿ ತೆರೆಕಂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಠಾರಿವೀರ ಸುರಸುಂದರಾಂಗಿ’ ಎಂಬ ಸಿನಿಮಾದಲ್ಲಿ ಡಾನ್ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರು 2014ರಲ್ಲಿ ತೆರೆಕಂಡ ‘ಕಂಚಿಲ್ದ ಬಾಲೆ’ ಎಂಬ ತುಳು ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದರು. ಆ ನಂತರ ಅನಾರೋಗ್ಯಕ್ಕೆ ತುತ್ತಾದ ರೈ ಯಾವ ಸಿನಿಮಾದಲ್ಲೂ ನಟಿಸಲಿಲ್ಲ.

ರೈ ಕ್ಲಾಪ್ ಮಾಡಿದ ಮೊದಲ ಚಿತ್ರ:
ಅಂದು ದುಬೈನಲ್ಲೇ ಕುಳಿತುಕೊಂಡು ಬೆಂಗಳೂರಿನ ಅಂಡರ್ ವರ್ಲ್ಡ್ ಅನ್ನು ನಡೆಸುತ್ತಿದ್ದ ಮುತ್ತಪ್ಪ ರೈ, 2008ರಲ್ಲಿ ತೆರೆಕಂಡ ‘ವಾರಸ್ದಾರ’ ಎಂಬ ಸಿನಿಮಾಗೆ ಕ್ಲಾಪ್ ಮಾಡಿದ್ದರು. ಈ ಸಿನಿಮಾವನ್ನು ಗುರುದೇಶ್ ಪಾಂಡೆ ನಿರ್ದೇಶನ ಮಾಡಿದ್ದರು. ಅಂದು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ರವಿ ಬೆಳಗೆರೆಯವರು ಅಭಿನಯಿಸಿದ್ದರು. ಬೆಳಗೆರೆಯವರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ರೈ, ಅವರಿಗಾಗಿ ಬಂದು ‘ವಾರಸ್ದಾರ’ ಸಿನಿಮಾಗಿ ಕ್ಲಾಪ್ ಮಾಡಿ ಹೋಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬಂದು ಬೆಂಗಳೂರಿನಲ್ಲಿ ರೌಡಿಗಳನ್ನು ಎದುರಿಸಿ ಡಾನ್ ಪಟ್ಟಕ್ಕೆ ಬಂದಿದ್ದ ರೈ ಭಂಡ ಧೈರ್ಯವನ್ನು ಹೊಂದಿದ್ದ ವ್ಯಕ್ತಿ. ಅವರೇ ಹೇಳಿದ್ದ ಪ್ರಕಾರ ಅವರ ದೇಹಕ್ಕೆ 5 ಬುಲೆಟ್ ಹೊಡೆದಿದ್ದರೂ ಅವರು ಪ್ರಜ್ಞೆ ಕಳೆದುಕೊಂಡಿರಲಿಲ್ಲವಂತೆ. ಹೀಗಾಗಿ ರೈ ಜೀವನವನ್ನೇ ಸಿನಿಮಾ ಮಾಡಬಹುದು ಎಂದು ಹಲವಾರು ನಿರ್ದೇಶಕರು ಟ್ರೈ ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಅವರ ಜೀವನ ಆಧಾರಿತ ಕಥೆಯನ್ನು ಮಿಶ್ರಣ ಮಾಡಲಾಗಿದೆ.

 

Comments

Leave a Reply

Your email address will not be published. Required fields are marked *