ಟೈಫಾಯ್ಡ್‌ನಿಂದ ಬಳಲುತ್ತಿದ್ದ ಮಗಳನ್ನು ಮಂತ್ರವಾದಿ ಬಳಿ ಕರೆದೊಯ್ದ ತಂದೆ – ಪ್ರಾಣಬಿಟ್ಟ ಯುವತಿ

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಕೂಡ ಮೂಢನಂಬಿಕೆಯನ್ನು ಜನ ಈಗಲೂ ನಂಬುತ್ತಾರೆ. ಇದರಿಂದ ಕೆಲವೊಮ್ಮೆ ಭಾರೀ ಅನಾಹುತಗಳು ಕೂಡ ಸಂಭವಿಸುತ್ತವೆ. ಇದಕ್ಕೆ ಚೆನ್ನೈನಲ್ಲಿ ನಡೆದಿರುವ ಘಟನೆಯೊಂದು ಪ್ರತ್ಯಕ್ಷ ಸಾಕ್ಷಿ.

ಹೌದು. ಟೈಫಾಯ್ಡ್ ನಿಂದ ಬಳಲುತ್ತಿದ್ದ ತನ್ನ ಮಗಳನ್ನು ವ್ಯಕ್ತಿಯೊಬ್ಬ ಮಂತ್ರವಾದಿ ಬಳಿ ಕರೆದೊಯ್ದು, ಇದೀಗ ಆಕೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ದುರ್ದೈವಿ ಯುವತಿಯನ್ನು ಥರಾಣಿ(19) ಎಂದು ಗುರುತಿಸಲಾಗಿದೆ. ಈಕೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ನಿವಾಸಿ. 9 ವರ್ಷಗಳ ಹಿಂದೆ ಥರಾಣಿ ತನ್ನ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ವಾಸವಾಗಿದ್ದಳು. ಆದರೆ ಆಕೆಗೆ ತಾಯಿಯ ನೆನಪು ಆಗಾಗ ಕಾಡುತ್ತಿತ್ತು. ಹೀಗೆ ಅಮ್ಮನ ನೆನಪಾದಾಗ ಆಕೆಯ ಸಮಾಧಿ ಬಳಿ ತೆರಳಿ ಸ್ವಲ್ಪ ಹೊತ್ತು ಕುಳಿತು ಬರುತ್ತಿದ್ದಳು. ಹೀಗೆ ಒಂದು ತಾಯಿಯ ಸಮಾಧಿಗೆ ಹೋಗಿ ಬಂದ ಬಳಿಕ ಥರಾಣಿ ಅನಾರೋಗ್ಯಕ್ಕೀಡಾಗಿದ್ದಳು. ಮಗಳ ಮೇಲೆ ತಾಯಿಯ ಭೂತ ಹಿಡಿದಿದೆ ಎಂದು ತಂದೆ ಆಕೆಯನ್ನು ಮಂತ್ರವಾದಿ ಬಳಿಗೆ ಕರೆದುಕೊಂಡು ಹೋಗಿದ್ದಾರೆ.

ಇತ್ತ ಮಂತ್ರವಾದಿ ಥರಾಣಿಯನ್ನು ಒಂದು ಬಾಕ್ಸ್ ನಲ್ಲಿ ಕೂಡಿ ಹಾಕಿ ಹೊಗೆ ಹಾಕಿದ್ದಾನೆ. ಮೊದಲೇ ಹುಷಾರಿಲ್ಲದೇ ಇದ್ದಿದ್ದರಿಂದ ಹೊಗೆ ತಾಳಲಾರದೇ ಥರಾಣಿ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಈ ವೇಳೆ ಥರಾಣಿಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಟೈಫಾಯ್ಡ್ ಇದೆ ಎಂದು ಹೇಳಿದ್ದಾರೆ.

ವೈದ್ಯರು ಜ್ವರ ಬಂದಿದೆ ಎಂದು ಹೇಳಿದರೂ ತಂದೆ ಮಾತ್ರ ಮಗಳನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ. ಅಲ್ಲದೆ ಆಕೆಯನ್ನು ಇನ್ನೊಬ್ಬ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾನೆ. ಇತ್ತ ದಿನದಿಂದ ದಿನಕ್ಕೆ ಥರಾಣಿಗೆ ಜ್ವರ ಜೋರಾಗುತ್ತಿದ್ದು, ನಡೆದಾಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದ್ದಾಳೆ. ಅಂತೆಯೇ ಆರೋಗ್ಯ ಸಂಪೂರ್ಣ ಕೈ ಕೊಡುತ್ತಿದ್ದಂತೆಯೇ ಆಕೆ ಸಾವನ್ನಪ್ಪಿದ್ದಾಳೆ.

ಸದ್ಯ ಘಟನೆ ಸಂಬಂಧ ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *