ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯ ದೇವಾಲಯ – ಭಾಷಣದಲ್ಲಿ ಶ್ರವಣಬೆಳಗೊಳವನ್ನು ಉಲ್ಲೇಖಿಸಿದ ಮೋದಿ

– ರಾಮನ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿತ್ತು
– ಸುವರ್ಣ ಅಧ್ಯಾಯ ಪ್ರಾರಂಭ

ಅಯೋಧ್ಯೆ: ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಭವ್ಯವಾದ ದೇವಾಲಯ ನಿರ್ಮಾಣವಾಗಲಿದೆ. ಈ ರಾಮಮಂದಿರ ನಮ್ಮ ಸಂಪ್ರದಾಯಗಳ ಆಧುನಿಕ ಸಂಕೇತವಾಗಲಿದೆ. ಇದು ನಮ್ಮ ಭಕ್ತಿಯ, ನಮ್ಮ ರಾಷ್ಟ್ರೀಯ ಭಾವನೆಯ ಸಂಕೇತವಾಗಲಿದೆ. ಈ ದೇವಾಲಯವು ಕೋಟಿ ಜನರ ಸಾಮೂಹಿಕ ನಿರ್ಣಯದ ಶಕ್ತಿಯನ್ನು ಸಂಕೇತ. ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಮ ಮಂದಿರ ಭೂಮಿಪೂಜೆಯ ಬಳಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರಾಮನ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿತ್ತು. ಆದರೆ ರಾಮ ನಮ್ಮ ಜೊತೆಯಿದ್ದ. ರಾಮನಿಗೆ ಎಲ್ಲ ಪ್ರಜೆಗಳು ಒಂದೇ . ಭಾರತದ ಏಕತೆಯ ಪ್ರತಿರೂಪ ರಾಮ ಎಂದು ಬಣ್ಣಿಸಿದರು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ. ಕನ್ಯಾಕುಮರಿಯಿಂದ ಕ್ಷೀರಭವಾವನಿಯವರೆಗೆ, ಕೋಟೇಶ್ವರದಿಂದ ಕಾಮಾಖ್ಯದವರೆಗೆ, ಜಗನ್ನಾಥನಿಂದ ಕೇದಾರನಾಥದವರೆಗೆ, ಸೋಮನಾಥದವರೆಗೆ ಕಾಶಿ ವಿಶ್ವನಾಥ್, ಶಿಖರ್ಜಿಯಿಂದ ಶ್ರವಣಬೆಳಗೊಳದವರೆಗೆ …. ಇಂದು ಇಡೀ ದೇಶ, ವಿಶ್ವ ಭಗವಾನ್ ರಾಮನ ಘೋಷಣೆಯಲ್ಲಿ ಮುಳುಗಿದೆ ಎಂದು ಹೇಳಿದರು.

ಭಾಸ್ಕರ ಸನ್ನಿಧಿಯಲ್ಲಿ ಸರಯೂ ನದಿ ತೀರದಲ್ಲಿ ಸುವರ್ಣ ಅಧ್ಯಾಯ ಪ್ರಾರಂಭಗೊಂಡಿದೆ. ಅಯೋಧ್ಯೆ ರಾಮ ಜನ್ಮಭೂಮಿ ಇವತ್ತು ಮುಕ್ತವಾಗಿದೆ. ಅರ್ಪಣ, ತರ್ಪಣ, ಸಂಘರ್ಷ, ಸಂಕಲ್ಪದ ಕನಸು ಈಗ ನನಸಾಗಿದೆ ಎಂದು ತಿಳಿಸಿದರು.

ಇಂಡೋನೇಷ್ಯಾದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದರೂ ಅಲ್ಲಿಯೂ ರಾಮಾಯಣವಿದೆ. ಕಾಂಬೋಡಿಯದಲ್ಲಿ ರಾಮನಿದ್ದಾನೆ. ಶ್ರೀಲಂಕಾದಲ್ಲೂ ರಾಮಾಯಣವಿದೆ. ರಾಮನ ಚರಿತ್ರೆಯನ್ನು ನಾವೆಲ್ಲ ಅಧ್ಯಯನ ಮಾಡಬೇಕು. ಶ್ರೀರಾಮನ ಸಾಮಾಜಿಕ ಸಾಮಾರಸ್ಯ ನಮಗೆ ಆದರ್ಶವಾಗಬೇಕು ಎಂದು ಕರೆ ನೀಡಿದರು.

ಎಲ್ಲರ ಸಹಕಾರದಿಂದ ಈ ದೇವಾಲಯ ನಿರ್ಮಾಣವಾಗುತ್ತಿದೆ. ಇತಿಹಾಸವು ಇಂದು ಕೇವಲ ಸೃಷ್ಟಿಯಾಗುತ್ತಿಲ್ಲ, ಅದು ಸ್ವತಃ ಪುನರಾವರ್ತನೆಯಾಗುತ್ತಿದೆ. ಇಲ್ಲಿ ದೇವಾಲಯ ಮಾತ್ರ ಆರಂಭವಾಗುತ್ತಿಲ್ಲ. ಈ ಪ್ರದೇಶಕ್ಕೆ ಹೊಸ ಆರ್ಥಿಕ ಅವಕಾಶಗಳನ್ನು ತೆರೆಯಲಿದೆ ಎಂದು ಮೋದಿ ಹೇಳಿದರು.

Comments

Leave a Reply

Your email address will not be published. Required fields are marked *