ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಬಹುಮುಖ್ಯ: ರವಿಶಾಸ್ತ್ರಿ

ಮುಂಬೈ: ಕೊರೊನಾ ವೈರಸ್ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಕ್ರೀಡೆಗಳು ಪ್ರಾರಂಭವಾದರೆ ಮೊದಲು ದೇಶೀಯ ಕ್ರಿಕೆಟ್, ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆರಂಭಿಸಲು ಪ್ರಾಮುಖ್ಯತೆ ನೀಡಬೇಕು ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಗ್ಲೋಬಲ್ ಕ್ರಿಕೆಟ್ ಟೂರ್ನಿಗಳಿಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಮೊದಲು ದೇಶೀಯ ಕ್ರಿಕೆಟ್ ಪರಿಸ್ಥಿತಿ ಸುಧಾರಣೆ ಆಗಬೇಕು. ಅಂತರರಾಷ್ಟ್ರೀಯ ಕ್ರಿಕೆಟಿಗರು, ದೇಶೀಯ ಕ್ರಿಕೆಟಿಗರು ಕ್ರೀಡಾಂಗಣಕ್ಕೆ ಆಗಮಿಸಬೇಕು. ಆ ಬಳಿಕ ದ್ವಿಪಕ್ಷೀಯ ಟೂರ್ನಿ ಕ್ರಿಕೆಟ್ ಟೂರ್ನಿಗಳು ಆರಂಭವಾಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಗ್ಲೋಬಲ್ ಟೂರ್ನಿಗಳನ್ನು ಆಯೋಜಿಸುವುದಕ್ಕಿಂತ ಐಪಿಎಲ್ ರೀತಿಯ ಟೂರ್ನಿ ನಿರ್ವಹಿಸುವುದು ಉತ್ತಮ. ಕ್ರಿಕೆಟ್ ಜಗತ್ತು ಮತ್ತೆ ಚೇತರಿಸಿಕೊಳ್ಳಲು ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಮುಖ್ಯ. ದೇಶೀಯ ಕ್ರಿಕೆಟ್ ಟೂರ್ನಿಗಳಿಗಿಂತ ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವುದು ಸದ್ಯದ ಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ದ್ವಿಪಕ್ಷೀಯ ಟೂರ್ನಿಗಳಲ್ಲಿ ಒಂದು ತಂಡದ ಮಾತ್ರ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ಹೆಚ್ಚಿನ ಜಾಗೃತಿ ವಹಿಸಿಕೊಳ್ಳಬಹುದು. ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿದರೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಅಲ್ಲದೇ ಐಪಿಎಲ್, ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಒಂದು ಅಥವಾ ಎರಡು ಸ್ಥಳಗಳಲ್ಲಿ ಆಯೋಜಿಸಬಹುದು. ಇದು ವಿಶ್ವಕಪ್ ದೃಷ್ಟಿಯಿಂದ ಸಾಧ್ಯವಲ್ಲ. ಈ ಎಲ್ಲಾ ಅಂಶಗಳನ್ನು ಐಸಿಸಿ ಗಮನಿಸಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳು ಕ್ರೀಡಾಪಟುಗಳ ಜೀವನದಲ್ಲಿ ಬಹುಮುಖ್ಯವಾಗುತ್ತದೆ. ಏಕೆಂದರೆ ಆಟಗಾರರಿಗೆ ನಿರಂತರ ತರಬೇತಿ ಅಗತ್ಯ. ಕ್ರಿಕೆಟ್ ಮಾತ್ರವಲ್ಲದೇ ಯಾವುದೇ ಕ್ರೀಡಾಪಟುಗಳನ್ನು ತೆಗೆದುಕೊಂಡರು ಇದು ಬಹುಮುಖ್ಯ ಸವಾಲು. ಲಾಕ್‍ಡೌನ್ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರಗಳನ್ನು ಆರಂಭಿಸಲಾಗುವುದು ಎಂದು ರವಿಶಾಸ್ತ್ರಿ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *