ಜೈಲಿಗೆ ಹೋಗಿ ಬಂದ ಮಹಾನಾಯಕನ ಕೈವಾಡ ಇದೆ: ಬಿಜೆಪಿ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಮಹಾನಾಯಕ ಯಾರೆಂಬುದನ್ನು ಬಹಿರಂಗಪಡಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ.

ಅಲ್ಲದೆ ರಾಹುಲ್ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿಚಕುಮಾರ್, ಸಿಡಿ ವಿಚಾರದಲ್ಲಿ ಬಿಜೆಪಿಯವರು ನನ್ನನ್ನು ಸಿಲುಕಿಸಲು ನೋಡಿದ್ದಾರೆ. ಬಿಜೆಪಿಯವರು ಮಾಡಬಾರದ್ದನ್ನು ಮಾಡಿಕೊಂಡು ನಂತರ ಆರೋಪವನ್ನು ನಮ್ಮ ಮೇಲೆ ಹೊರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ನಾನು ಯಾರಿಗೂ ಹೆದರುವ ಮಗನಲ್ಲ ಎಂದು ಗುಡುಗಿದ್ದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ನಡೆಯಲಿರುವ ಎಸ್.ಐ.ಟಿ. ತನಿಖೆ ಸರಿದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೆವೆ. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಶಾಸಕರ ಮೇಲೆ ಕೇಸು ಹಾಕಿದೆ. ಇರಲಿ ಕಾಲವೇ ಉತ್ತರ ಹೇಳುತ್ತೆ. ಬಿಜೆಪಿಯವರು ಮಾಡುತ್ತಿರುವ ಎಲ್ಲ ಮಸಲತ್ತು ಗೊತ್ತಿದೆ. ಟೈಂ ಬಂದಾಗ ಎಲ್ಲಾ ಬಿಚ್ಚಿಡ್ತೀನಿ ಎಂದು ವಾಗ್ದಾಳಿ ನಡೆಸಿದ್ದರು.

ಸದ್ಯ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ನಿನ್ನೆ ರಾತ್ರಿ ರಮೇಶ್ ಜಾರಕೊಹೊಳಿಯವರನ್ನು ವಿಚಾರಣೆ ನಡೆಸಿದೆ. ಈ ವೇಳೆ ಮಾಜಿ ಸಚಿವರು, ಎಸ್‍ಐಟಿ ಪೊಲೀಸರ ಎದುರು 4 ಪುಟಗಳ ಹೇಳಿಕೆ ದಾಖಲಿಸಿದ್ದಾರೆ. ಎಸಿಪಿ ಧರ್ಮೆಂದ್ರ ಎದುರು ಜಾರಕಿಹೊಳಿ ಹೇಳಿಕೆ ನೀಡಿದ್ದು, ರಾಜಕೀಯ ಷಡ್ಯಂತ್ರ, ಬ್ಲ್ಯಾಕ್‍ಮೇಲ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ನನ್ನ ವಿರುದ್ಧ 4 ತಿಂಗಳಿಂದ ಬ್ಲ್ಯಾಕ್‍ಮೇಲ್ ನಡೆಯುತ್ತಿತ್ತು. ನಿನ್ನನ್ನ ರಾಜಕೀಯವಾಗಿ ಮುಗಿಸ್ತೀವಿ ಎಂದು ಧಮ್ಕಿ ಹಾಕಿದ್ದರು. ನನ್ನ ಆಪ್ತ ನಾಗರಾಜ್ ಮೂಲಕ ಹಣಕ್ಕಾಗಿ ನನ್ನ ಮೇಲೆ ಒತ್ತಡ ಹಾಕಿದ್ದರು. ಆದರೆ ನಾನು ಆ ಒತ್ತಡಕ್ಕೆ ಮಣಿದಿರಲಿಲ್ಲ ಎಂದು ಹೇಳುವ ಮೂಲಕ 4 ತಿಂಗಳಿಂದ ನಡೆಯುತ್ತಿದ್ದ ಷಡ್ಯಂತ್ರದ ಬಗ್ಗೆ ಎಸ್‍ಐಟಿಗೆ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *