ಜೆ.ಪಿ.ನಡ್ಡಾ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ

ಕೋಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾನಹಗಳ ಕಲ್ಲು ತೂರಾಟ ನಡೆಸಲಾಗಿದೆ. ಕೋಲ್ಕತ್ತಾದಿಂದ ದಕ್ಷಿಣ 24 ಪರಗಣದ ಡೈಮಂಡ್ ಹಾರ್ಬರ್ ಗೆ ತೆರಳುವ ಮಾರ್ಗ ಮಧ್ಯೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಇದು ಟಿಎಂಸಿ (ತೃಣಮೂಲ ಕಾಂಗ್ರೆಸ್) ಕೈವಾಡ ಎಂದು ಬಿಜೆಪಿ ಆರೋಪಿಸಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇನ್ನು ಬಿಜೆಪಿಯ ಚುನಾವಣೆಯ ಗಿಮಿಕ್ ಎಂದು ಟಿಎಂಸಿ ತಿರುಗೇಟು ನೀಡಿದೆ.

ದಕ್ಷಿಣ 24 ಪರಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಜೆ.ಪಿ.ನಡ್ಡಾ, ನನ್ನ ಬಳಿ ಬುಲೆಟ್ ಪ್ರೂಫ್ ವಾಹನ ಇದ್ದಿದ್ದರಿಂದ ನಾನು ಸುರಕ್ಷಿತನಾಗಿದ್ದೇನೆ. ಇಂದು ಬಹುತೇಕ ಎಲ್ಲ ವಾಹನಗಳ ಮೇಲೆ ಕಲ್ಲು ಎಸೆಯಲಾಗಿದೆ. ಗೂಂಡಾ ಆಳ್ವಿಕೆ ಅಂತ್ಯಗೊಳಿಸುವ ಸಕಾಲ ಬಂದಿದೆ. ಟಿಎಂಸಿ ಮತ್ತು ಅದರ ಕಾರ್ಯಕರ್ತರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಮಾರ್ಗ ಮಧ್ಯೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಹಿಂಸೆ, ಸರ್ವಾಧಿಕಾರ, ಗೂಂಡಾ ಆಳ್ವಿಕಯ ದೃಶ್ಯಗಳನ್ನ ನೋಡಿದೆ. ತಾಯಿ ದುರ್ಗಾದೇವಿಯ ಆಶೀರ್ವಾದದಿಂದ ಸುರಕ್ಷಿತವಾಗಿದ್ದೇನೆ. ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯದ ದಿನಗಳು ಸನೀಹಕ್ಕೆ ಬಂದಿದ್ದು, ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಲಿದೆ ಎಂದು ನಡ್ಡಾ ಭವಿಷ್ಯ ನುಡಿದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಜೆ.ಪಿ.ನಡ್ಡಾ ಅವರ ಮೇಲೆ ಮಮತಾ ಬ್ಯಾನರ್ಜಿ ದಾಳಿ ನಡೆಸಿದ್ದಾರೆ. ಈ ಸಂಬಂಧ ತನಿಖೆ ಆಗಬೇಕು. ಇದು ಪ್ರಜಾಪ್ರಭುತ್ವದ ಕೊಲೆಯ ಪ್ರಯತ್ನ. ಈ ದಾಳಿಗೆ ಪಶ್ಚಿಮ ಬಂಗಾಳದ ಜನತೆ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *