ಜುಲೈ 26ಕ್ಕೆ ಬಿಎಸ್‍ವೈ ಮಹಾ ಭಾಷಣ? – ಸಿಎಂ ಬೆಂಬಲಿಗರು ಸೈಲೆಂಟ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಕಡೆಗೂ ತೆರೆ ಬೀಳುವಂತೆ ಕಾಣುತ್ತಿದೆ. ರಾಜ್ಯ ಬಿಜೆಪಿಯ ಮಹಾನಾಯಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಗಮನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಬಗ್ಗೆ ಕಳೆದ ವಾರವೇ ಪಬ್ಲಿಕ್ ಟಿವಿ ಸುಳಿವು ನೀಡಿತ್ತು. ಇದರ ಬೆನ್ನಲ್ಲೇ, ಮಹಾ ನಿರ್ಗಮನದ ಚಟುವಟಿಕೆ ಬಿರುಸುಗೊಂಡಿವೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಹೈಕಮಾಂಡ್ ಸೂಚನೆ ಮೇರೆಗೆ ಜುಲೈ 26ರಿಂದ ಆಗಸ್ಟ್ 15ರೊಳಗೆ ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ಜುಲೈ 26ಕ್ಕೆ ಅಂದ್ರೆ ಮುಂದಿನ ಸೋಮವಾರ ರಾಜ್ಯ ಸರ್ಕಾರ 2 ವರ್ಷ ಪೂರೈಸುತ್ತಿದ್ದು, ಅಂದೇ ಸಿಎಂ ಯಡಿಯೂರಪ್ಪ ಮಹಾಭಾಷಣ ಮಾಡಲಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ಕೊನೆಯ ಭಾಷಣವೂ ಆಗಲಿದೆ ಎಂದು ವಿಶ್ಲೇಷಿಸಲಾಗ್ತಿದೆ. ಈ ಮೊದಲು ಸಿಎಂ ಬದಲಾವಣೆ ಎಂದ ಕೂಡಲೇ ವಾಗ್ದಾಳಿಗೆ ನಿಲ್ಲುತ್ತಿದ್ದ ಯಡಿಯೂರಪ್ಪ ಬೆಂಬಲಿಗ ಶಾಸಕರು ಈಗ ಹೆಚ್ಚು ಕಡಿಮೆ ಸೈಲೆಂಟ್ ಆಗಿದ್ದಾರೆ. ಅವರ ವಿರೋಧಿ ಪಾಳಯ ಕೂಡ ಹೆಚ್ಚು ಸದ್ದು ಮಾಡುತ್ತಿಲ್ಲ. ಇದನ್ನೂ ಓದಿ: ಯಡಿಯೂರಪ್ಪ ಬದಲಾವಣೆ ಬಗ್ಗೆ ವರ್ಷದ ಹಿಂದೆಯೇ ಹೇಳಿದ್ದೆ, ಅದು ಈಗ ನಿಜವಾಗ್ತಿದೆ: ಸಿದ್ದರಾಮಯ್ಯ

ಸಿಎಂ ಕೂಡ ಎಲ್ಲಾ ಫೈನಲ್ ಆಯ್ತು ಅನ್ನೋ ರೀತಿ ಕೂಲ್ ಆಗಿದ್ದಾರೆ. ಗುರುವಾರ ಸಂಪುಟ ಸಭೆ ನಡೆಸಲಿದ್ದಾರೆ. ಶುಕ್ರವಾರ ಶಿವಮೊಗ್ಗ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಬಿಜೆಪಿಯಲ್ಲಿ ಮಹಾ ಪಲ್ಲಟ
ಜುಲೈ 26ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಬಿಎಸ್‍ವೈ ಕರೆದಿದ್ದು, ಶಾಸಕರು, ಮುಖಂಡರನ್ನು ಉದ್ದೇಶಿಸಿ ಬಿಎಸ್‍ವೈ ಮಹಾ ಭಾಷಣ ಮಾಡಲಿದ್ದಾರೆ. ಶಾಸಕರು, ಅಧಿಕಾರಿಗಳ ಜೊತೆ ಫೋಟೋ ಸೆಷನ್‍ಗೆ ಸಮಯ ನಿಗದಿ ಮಾಡುವ ಸಾಧ್ಯತೆಯಿದೆ. ಫೋಟೋ ಸೆಷನ್ ಬಳಿಕ ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಆಗಸ್ಟ್ 15ರವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯಬಹುದು ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *