ಜುಲೈ ಅಂತ್ಯಕ್ಕೆ ಬೆಂಗ್ಳೂರಲ್ಲಿ 40 ಸಾವಿರ ಕೇಸ್- ತಜ್ಞರಿಂದ ಸರ್ಕಾರಕ್ಕೆ ಡೆಡ್ಲಿ ವಾರ್ನಿಂಗ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟವೇ ಆಗ್ತಿದೆ. ಅದರಲ್ಲೂ ಕೊರೊನಾ ಬೆಂಗಳೂರಿಗೆ ಮಹಾಕಂಟಕ ತಂದೊಡ್ಡುತ್ತೆ ಎಂದು ತಜ್ಞರು ಡೆಡ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.

ಹೌದು. ಬೆಂಗಳೂರು ಈಗಾಗಲೇ ಕೊರೊನಾ ಸೋಂಕಿಗೆ ತತ್ತರಿಸಿದೆ. ಆದರೆ ಇದರ ನಡುವೆ ಮತ್ತೊಂದು ಆತಂಕಕಾರಿ ವಿಚಾರ ಹೊರಬಿದ್ದಿದೆ. ಜುಲೈ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 30 ಸಾವಿರದಿಂದ 40 ಸಾವಿರ ಸೋಂಕು ದಾಖಲಾಗಬಹುದು ಅಂತ ತಜ್ಞ ವೈದ್ಯರಾದ ಸುದರ್ಶನ್ ಬಲ್ಲಾಳ್ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ 15 ದಿನ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹೆಚ್ಚಾಗುತ್ತೆ ಎಂದೂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಒಂದು ವಾರದ ಕೊರೊನಾ ಮಹಾ ಕಾಣಿಕೆಯಿಂದ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 5 ಸಾವಿರ ದಾಟಿದೆ. ನಿನ್ನೆ ಕೂಡ ನಗರದಲ್ಲಿ ವೈರಸ್ ಕೇಕೆ ಹಾಕಿ ಕುಣಿದಿದೆ. ನಿನ್ನೆ ಬೆಂಗಳೂರಿನಲ್ಲಿ 735 ಕೇಸ್ ದಾಖಲಾಗಿದೆ. ಈ ಮೂಲಕ ನಗರದಲ್ಲಿ ಕೇಸ್‍ಗಳ ಸಂಖ್ಯೆ 5290ಕ್ಕೆ ಏರಿಕೆಯಾಗಿದೆ. ದೌರ್ಭಾಗ್ಯ ಅಂದ್ರೆ ಬೆಂಗಳೂರಿನಲ್ಲಿ ಇಷ್ಟು ಕೇಸ್ ದಾಖಲಾದರೂ ನಿನ್ನೆ ಒಂದೇ ಒಂದು ಡಿಸ್ಚಾರ್ಜ್ ಆಗಿಲ್ಲ. ಇಲ್ಲಿ ಸಕ್ರಿಯ ಪ್ರಕರಣಗಳೇ ಬರೋಬ್ಬರಿ 4,649 ಇದೆ.

ಸದ್ಯ ಇರುವ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವ ಕೆಲಸವನ್ನು ಬಿಬಿಎಂಪಿ ಕೈಬಿಟ್ಟಿದ್ದು, ಹೀಗಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಈವರೆಗೆ 3,036 ಮಂದಿ ಸೋಂಕಿತರ ಪ್ರಕರಣದ ಹಿಸ್ಟರಿ ಪತ್ತೆಯಾಗಿಲ್ಲ. ಸೀಲ್‍ಡೌನ್ ಏರಿಯಾದಲ್ಲಿ ಏನೇ ಹೆಚ್ಚು ಕಡಿಮೆ ಆದ್ರೂ ಆ ವಲಯದ ಡಿಸಿಪಿಗಳೇ ಜವಾಬ್ದಾರರು ಎಂದು ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಕೊರೊನಾ ಸ್ಫೋಟವಾಗ್ತಿದೆ. ಈ ರಿಪೋರ್ಟ್ ಬೆಂಗಳೂರನ್ನು ಇನ್ನಷ್ಟು ದಂಗುಬಡಿಸಿದೆ

Comments

Leave a Reply

Your email address will not be published. Required fields are marked *