ಜೀವ ತೆಗೆಯೋಕೆ ವ್ಯಾಕ್ಸಿನ್ ಮಾಡಿದ್ದಾರೆ, ಹಾಕಿಸಿಕೊಂಡ್ರೆ ಮಕ್ಕಳಾಗಲ್ಲ ಅಂದ್ರು, ಅವರೇ ಕದ್ದು ಹಾಕಿಸಿಕೊಂಡ್ರು: ಸಿಟಿ ರವಿ

– ಆಗ ಟಾರ್ಗೆಟ್ ರೀಚ್ ಆಗ್ಲಿಲ್ಲ, ಅಪಾರ ಪ್ರಮಾಣದ ವ್ಯಾಕ್ಸಿನ್ ವೇಸ್ಟ್ ಆಗಿದೆ
– ಪಶ್ಚಿಮ ಬಂಗಾಳದಲ್ಲಿ ಹತ್ಯಾ ರಾಜಕೀಯ ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆ

ಚಿಕ್ಕಮಗಳೂರು: ಬಿಜೆಪಿ ವ್ಯಾಕ್ಸಿನ್, ಜೀವ ತೆಗೆಯುವುದಕ್ಕೆ ಮಾಡಿದ್ದಾರೆ. ಈ ವ್ಯಾಕ್ಸಿನ್ ತಗೊಂಡ್ರೆ ಮಕ್ಕಳಾಗಲ್ಲ ಎಂದು ಅಪಪ್ರಚಾರ ಮಾಡಿದರು. ನಂತರ ಅವರೇ ಕದ್ದು ಹೋಗಿ ವ್ಯಾಕ್ಸಿನ್ ತಗೆದುಕೊಂಡರು. ಆದರೆ ಈಗ ಜನರು ಸಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವ್ಯಾಕ್ಸಿನ್ ಕುರಿತು ರಾಜಕೀಯ ಅಪಪ್ರಚಾರ ಮಾಡಿದರು. ಈ ಹಿಂದೆ ಟಾರ್ಗೆಟ್ ರೀಚ್ ಆಗುತ್ತಿರಲಿಲ್ಲ. ಈಗ ವ್ಯಾಕ್ಸಿನ್ ಗೆ ಬೇಡಿಕೆಯಿದೆ, ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಉಪಯೋಗಿಸಿಕೊಳ್ಳದೇ ವೇಸ್ಟ್ ಆಗಿದೆ. ಇದಕ್ಕೆಲ್ಲ ಕಾರಣ ರಾಜಕೀಯ ಮುಖಂಡರು ಅನುಮಾನ ಹುಟ್ಟುಹಾಕಿದ್ದು, ಈಗ ಲಸಿಕೆಗೆ ಎಲ್ಲೆಡೆ ಅಭಾವ ಸೃಷ್ಟಿಯಾಗಿದೆ. ಇದರ ಹೊಣೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ 6 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಹತ್ಯಾ ರಾಜಕೀಯ ವಿರೋಧಿಸಿ ನಾಳೆ ಬಿಜೆಪಿಯಿಂದ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಸುಮಾರು 280ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪ.ಬಂಗಾಳದ ಹತ್ಯಾ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸವಿದೆ. ಹತ್ಯಾ ರಾಜಕಾರಣವನ್ನು ಮುಂದುವರಿಸುವ ಕೆಲಸ ಟಿಎಂಸಿ ಮಾಡುತ್ತಿದೆ. ಹೀಗಾಗಿ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

Comments

Leave a Reply

Your email address will not be published. Required fields are marked *