ಜಿ.ಪ ಸದಸ್ಯರ ಹೆಸ್ರಲ್ಲಿ ನಕಲಿ ಸಹಿ ಮಾಡಿ ನನ್ನ ಹೆದರಿಸಲು ಬರ್ತಿದ್ದಾರೆ: ಅಧ್ಯಕ್ಷೆ ಶ್ವೇತಾ ದೇವರಾಜ್

ಹಾಸನ: ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಈಗ ನಕಲಿ ಮತ್ತು ಮೋಸದ ಸಹಿಯ ಆರೋಪ ಸದ್ದು ಮಾಡುತ್ತಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮನ್ನು ಹೆದರಿಸಲು ಜಿಲ್ಲಾ ಪಂಚಾಯಿತಿ ಸದಸ್ಯರಲ್ಲದವರು ಕೂಡ ಸದಸ್ಯರೆಂದು ಹೇಳಿಕೊಂಡು ನಕಲಿ ಸಹಿಯ ಪತ್ರ ಕಳುಹಿಸಿ ಬೆದರಿಸಲು ಬರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿ ಇದು ಹೊಸದೇನಲ್ಲ. ಆದರೆ ಇದೆಲ್ಲದರ ನಡುವೆ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್, ಜೆಡಿಎಸ್ ಮುಖಂಡರ ವಿರುದ್ಧ ನಕಲಿ ಮತ್ತು ಮೋಸದ ಸಹಿಯ ಗಂಭೀರ ಆರೋಪ ಮಾಡಿದ್ದಾರೆ. ನಾನು ಸಾಮಾನ್ಯ ಸಭೆ ಕರೆದಿಲ್ಲ, ಹಲವು ವಿಷ್ಯಗಳ ಬಗ್ಗೆ ಚರ್ಚಿಸಬೇಕು ಎಂದು ಜೆಡಿಎಸ್ ಮುಖಂಡ, ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಸ್ವರೂಪ್ ಅವರ ಕಚೇರಿಯಿಂದ ಸದಸ್ಯರ ಸಹಿಯಿರುವ ಪತ್ರ ಬಂದಿದೆ ಎಂದಿದ್ದಾರೆ.

ಈ ಪತ್ರದಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸದಸ್ಯರ ಹೆಸರಿನಲ್ಲಿ ಪೋರ್ಜರಿ ಸಹಿ ಹಾಕಿದ್ದಾರೆ. ಅದರಲ್ಲೂ ಪತ್ರದಲ್ಲಿ ಬಾಣವಾರ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಬಿ ಎಸ್ ಎಂಬುವವರ ಹೆಸರಲ್ಲಿ ಸಹಿ ಹಾಕಲಾಗಿದೆ. ಆದರೆ ಈ ಅಶೋಕ್ 2018ರಲ್ಲೇ ಹಾಸನ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನೀಡಿರುವ ದೂರಿನ ಪತ್ರಕ್ಕೆ ಸಹಿಹಾಕಲು ಹೇಗೆ ಸಾಧ್ಯ ಎಂಬ ಪ್ರೆಶ್ನೆ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಆನಂದ್ ಎಂಬುವವರು ಕಾಂಗ್ರೆಸ್ ಪಕ್ಷದವರು. ಆದರೆ ತನ್ನ ವಿರುದ್ಧ ಬಂದಿರುವ ಪತ್ರದಲ್ಲಿ ಅವರ ಸಹಿಯೂ ಇದೆ. ಈಗ ಅವರನ್ನ ಕೇಳಿದರೆ ನಾನು ಸಹಿ ಹಾಕಿಲ್ಲ ಎಂದಿದ್ದಾರೆ. ಈ ಬಗ್ಗೆ ಸದಸ್ಯೆ ಶ್ವೇತಾ ಆನಂದ್ ಪ್ರತಿಕ್ರಿಯೆ ನೀಡಿದ್ದು, ನಾನು ಅಧ್ಯಕ್ಷೆ ವಿರುದ್ಧ ಯಾವುದೇ ದೂರಿನ ಪತ್ರಕ್ಕೆ ಸಹಿ ಹಾಕಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನನ್ನೂ ಸೇರಿದಂತೆ 23 ಸದಸ್ಯರಿಗೆ ಅಧಿಕಾರದ ಆಸೆ ತೋರಿಸಿ, ರೇವಣ್ಣ ಹಾಗೂ ಭವಾನಿ ರೇವಣ್ಣ ಹೊಳೆನರಸೀಪುರದ ಅವರ ಮನೆಯಲ್ಲಿ, ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದರು. ಅದನ್ನು ಈಗ ಅಧ್ಯಕ್ಷೆ ವಿರುದ್ಧ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ನಕಲಿ ಮತ್ತು ಮೋಸದ ಸಹಿ ಬಗ್ಗೆ ದೂರು ದಾಖಲಿಸುವುದಾಗಿ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಚ್ಚರಿಕೆ ನೀಡಿದ್ದಾರೆ. ಆದರೆ ಹಾಸನ ಜನ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರಿಬ್ಬರ ವಿರುದ್ಧವೂ ಬೇಸರ ಹೊರಹಾಕುತ್ತಿದ್ದಾರೆ. ಇಬ್ಬರೂ ಒಟ್ಟಾಗಿ ಅಧಿಕಾರ ನಡೆಸುವುದು ಬಿಟ್ಟು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಅಭಿವೃದ್ಧಿ ಕೆಲಸವನ್ನೇ ಮರೆತುಬಿಟ್ಟಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

Comments

Leave a Reply

Your email address will not be published. Required fields are marked *