ಜಿಲ್ಲೆಗೆ ಅನುದಾನ ನಿರೀಕ್ಷೆ ಮಾಡಿದ್ದೆ, ನಿಗಮ ಮಂಡಳಿ ಅಲ್ಲ: ಶಾಸಕ ಶಿವನಗೌಡ ನಾಯಕ್

ರಾಯಚೂರು: ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲು ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನು ಆಕಾಂಕ್ಷಿಯೂ ಅಲ್ಲ ಎಂದು ರಾಯಚೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ನಾನು ಯಾವುದೇ ನಿಗಮ ಮಂಡಳಿ ಕೇಳಿರಲಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಬಾರಿ ಅನುದಾನ ಕೇಳಿದ್ದೇನೆ. ಆದರೆ ಯಾವುದೇ ಪದವಿಯನ್ನು ನಿರೀಕ್ಷೆ ಮಾಡಿಲ್ಲ. ನನ್ನನ್ನು ಕೇಳಿದ್ದರೆ ನಿಗಮ ಮಂಡಳಿಗೆ ಕಾರ್ಯಕರ್ತರ ಹೆಸರು ಸೂಚಿಸುತ್ತಿದ್ದೆ, ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಶಿವನಗೌಡ ನಾಯಕ್ ಕಿಡಿಕಾರಿದ್ದಾರೆ.

ಜಿಲ್ಲೆಗೆ ವಿಮಾನ ನಿಲ್ದಾಣ, ಏಮ್ಸ್ ಗೆ ಶಿಫಾರಸ್ಸು ಮಾಡುವಂತೆ ಕೇಳಿದ್ದೇನೆ. ಬಜೆಟ್ ನಲ್ಲಿ ಘೋಷಣೆಯಾಗಿರುವ ತಿಂತಿಣಿ ಬ್ರೀಡ್ಜ್ ಜಲಾಶಯಕ್ಕೆ 10 ಸಾವಿರ ಕೋಟಿ ರೂ. ಕೊಡಬೇಕು ಎಂಬುದು ನನ್ನ ಬೇಡಿಕೆ. ಸಿಂ ಬಿ.ಎಸ್.ಯಡಿಯೂರಪ್ಪನವರು ಗೌರವಪೂರ್ವಕವಾಗಿ ಪದವಿ ಕೊಟ್ಟಿರಬಹುದು. ಆದರೆ ನಾನು ಕೇಳಿದ್ದು ಅನುದಾನ ಮಾತ್ರ. ನಾವು ಅಭಿವೃದ್ಧಿ ನಿರೀಕ್ಷೆ ಮಾಡಿದ್ದೇವೆ ಎಂದಿದ್ದಾರೆ.

ಜಿಲ್ಲೆಗೆ ಕೇಳಿದ್ದ ಅನುದಾನ ಕೊಟ್ಟಿದ್ದರೆ ಸಾಕಿತ್ತು, ಪದವಿ ಕೊಡುವುದು ಬೇಕಿರಲಿಲ್ಲ. ಯಾಕೆ ಪದವಿ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಶಿವನಗೌಡ ನಾಯಕ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *