ಜಾರಕಿಹೊಳಿ, ಯೋಗೇಶ್ವರ್ ಪರ ಇಲ್ಲ, ಬೊಮ್ಮಾಯಿಗೆ ನನ್ನ ಬೆಂಬಲ: ವಿಶ್ವನಾಥ್

ನವದೆಹಲಿ: ನಾನು ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಸಿ.ಪಿ.ಯೋಗೇಶ್ವರ್ ಪರವಾಗಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನನ್ನ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಒಳ್ಳೆಯ ಸರ್ಕಾರ ನೀಡಲಿ, 20 ತಿಂಗಳು ಉತ್ತಮ ಆಡಳಿತ ನೀಡುವ ನಿರೀಕ್ಷೆ ಇದೆ. ನಾನು ಬಂಡಾಯಗಾರಾದ ರಮೇಶ್ ಜಾರಕಿಹೋಳಿ, ಸಿ.ಪಿ.ಯೋಗೇಶ್ವರ್ ಜೊತೆಗಿಲ್ಲ. ಬೊಮ್ಮಾಯಿಯವರಿಗೆ ನನ್ನ ಬೆಂಬಲವಿದೆ. ಆನಂದ್ ಸಿಂಗ್ ಅವರು ವಾಪಸ್ ಕಾಂಗ್ರೆಸ್ ಸೇರುತ್ತಾರೆ ಎಂಬುದು ಗಾಳಿ ಮಾತು. ಯಾರೂ ಕಾಂಗ್ರೆಸ್ ಗೆ ವಾಪಸ್ ಆಗುವುದಿಲ್ಲ. ಬಿಜೆಪಿಯಿಂದಲೇ ಚುನಾವಣೆ ಸ್ಪರ್ಧೆ ಮಾಡಲಿದ್ದಾರೆ ಎಂದರು.

ಮಂತ್ರಿಯಾಗಿರುವ ಸ್ನೇಹಿತರು ಅನಾವಶ್ಯಕ ಗೊಂದಲ ಮೂಡಿಸುವುದು ಸರಿಯಲ್ಲ, ಎಲ್ಲವೂ ಪ್ರಮುಖ ಖಾತೆ, ಅದನ್ನು ನಿಭಾಯಿಸುವುದು ಮುಖ್ಯ. ಸಿಕ್ಕಿರುವ ಖಾತೆಯ ಮೂಲಕ ಅಭಿವೃದ್ಧಿ ಮಾಡುವ ಬಗ್ಗೆ ಅಧ್ಯಯನ ಮಾಡಬೇಕು. ಅನಾವಶ್ಯಕ ಗೊಂದಲಗಳಿಂದ ಯಾರಿಗೂ ಲಾಭ ಇಲ್ಲ. ಆಡಳಿತದ ದೃಷ್ಟಿಯಿಂದ ಖಾತೆಗಳನ್ನು ವಹಿಸಿಕೊಂಡು, ಪ್ರಮಾಣಿಕವಾಗಿ ಕೆಲಸ ಮಾಡಬೇಕು. 20 ತಿಂಗಳಲ್ಲಿ ಚುನಾವಣೆ ಇದೆ, ಸಮಯ ಕಡಿಮೆ ಇದೆ, ವೇಗವಾಗಿ ಕೆಲಸ ಮಾಡಬೇಕಿದೆ. ಖಾತೆ ಗೊಂದಲ ಇಟ್ಟುಕೊಂಡು ಸಮಯ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.

ಎಲ್ಲರೂ ಸಂಪುಟ ದರ್ಜೆಯ ಸಚಿವರಿದ್ದಾರೆ. ಕ್ಯಾಬಿನೆಟ್ ನಲ್ಲಿ ಎಲ್ಲರೂ ಇರುತ್ತಾರೆ. ಪ್ರತಿ ಸಂಪುಟ ಸಚಿವರು ಸರ್ಕಾರದ ಭಾಗ, ಸರ್ಕಾರವಾಗಿ ಕೆಲಸ ಮಾಡಬೇಕು. ಇಲಾಖೆಯ ಮಂತ್ರಿಯಾಗಿ ಕೆಲಸ ಮಾಡುವುದಲ್ಲ, ಇಲಾಖೆಯ ಜವಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು ತಿಳಿಸಿದರು.

ಮೈತ್ರಿ ಸರ್ಕಾರ ಪತನಕ್ಕೆ ಅಗೌರವ ಕಾರಣ, ಜೆಡಿಎಸ್ ಕಾಂಗ್ರೆಸ್ ನಾಯಕರು ಗೌರವ ನೀಡಲಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಲ್ಲರಿಗೂ ಗೌರವ ನೀಡುತ್ತಿದ್ದಾರೆ. ಸಮಾಧಾನದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಶರ್ಫಡ್ಸ್ ಇಂಡಿಯಾ ಇಂಟರ್ ನ್ಯಾಶನಲ್ ಒನ್ ಫ್ಲಾಗ್- ಒನ್ ನೇಮ್ ಅಡಿ ಇಡೀ ಕುರುಬ ಸಮುದಾಯ ಮುಂದುವರೆಯಲು ತೀರ್ಮಾನ ಮಾಡಲಾಗಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ಸಮಾಜದ ಮುಂದಿನ ಸಮಾವೇಶ ನಡೆಯಲಿದೆ. ಕುರುಬ ಸಮುದಾಯ ಒಂದು ಜಾತಿ ಅಲ್ಲ ಅದೊಂದು ಸಮುದಾಯ, ಇಡೀ ದೇಶದಲ್ಲಿ ಕುರುಬ ಸಮುದಾಯವನ್ನು ಎಸ್‍ಟಿ ಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕುರುಬರನ್ನು ಎಸ್‍ಟಿ ಗೆ ಸೇರಿಸುವ ಕುರಿತು ಕುಲಶಾಸ್ತ್ರ ಅಧ್ಯಯನ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Comments

Leave a Reply

Your email address will not be published. Required fields are marked *