ಜಮ್ಮು ಕಾಶ್ಮೀರದ ಶಾರ್ಟ್ ಸರ್ಕ್ಯೂಟ್‍ನಲ್ಲಿ ವಿಜಯಪುರದ ಯೋಧ ನಿಧನ

– ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಯೋಧ

ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಕರ್ತವ್ಯ ನಿರತ ಬಿಎಸ್‍ಎಫ್ ಯೋಧ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಬಡಿಗೇರ(31) ನಿಧನವಾದ ಯೋಧ. ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಯೋಧ ಸಾವನ್ನಪ್ಪಿದ್ದು, ಭಾರತೀಯ ಸೇನೆ ದೂರವಾಣಿ ಕರೆ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದೆ.

ಶಿವಾನಂದ ಒಂದೂವರೆ ವರ್ಷದ ಹಿಂದಷ್ಟೇ ಜಿಲ್ಲೆಯ ತಾಳಿಕೋಟೆ ತಾಲೂಕಿನ ತುಂಬಗಿಯ ಪುಷ್ಪಾ ಅವರನ್ನು ವಿವಾಹವಾಗಿದ್ದ. ಶಿವಾನಂದ 14 ವರ್ಷಗಳ ಹಿಂದೆ ಸೇನೆ ಸೇರಿದ್ದರು. ಬಾಂಗ್ಲಾ, ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ, ಸದ್ಯ ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜನೆಯಾಗಿದ್ದರು.

ಶಿವಾನಂದ ಅವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬಗ್ಗೆ ಶಿವಾನಂದ ಅವರ ಸಹೋದರ ಕಾಳಪ್ಪ ಬಡಿಗೇರಗೆ ಸೇನೆ ಮಾಹಿತಿ ನೀಡಿದೆ. ಕಾಳಪ್ಪ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮನೆಯವರು ದುಃಖಿತರಾಗಿದ್ದಾರೆ. ಶಿವಾನಂದ ಅವರ ಪಾರ್ಥೀವ ಶರೀರವನ್ನು ಬೇಗನೆ ತರುವಂತೆ ಜಿಲ್ಲಾಡಳಿತಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *